ಸೃಷ್ಟಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಥೆರಪಿ ಸಂಸ್ಥೆಯು ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ಡಾ. ಸೊನಾಲ್ ಮಾನ್ಸಿಂಗ್ ಅವರಿಗೆ ಸೃಷ್ಟಿ ರಾಷ್ಟ್ರೀಯ ಸಾಧನೆ ಪ್ರಶಸ್ತಿ (ಸೃಷ್ಟಿ ನ್ಯಾಷನಲ್ ಅಚೀವ್ಮೆಂಟ್ ಅವಾರ್ಡ್)ಯನ್ನು ನೀಡಿ ಗೌರವಿಸುತ್ತಿದೆ.
ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಇಲಾಖೆಯ ಆಯುಕ್ತ ಮನು ಬಳಿಗಾರ್ ಮತ್ತು ಇಸ್ಕಾನ್ನ ಶ್ರೀ ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುದಾಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ನೃತ್ಯವೆಂದರೆ ಕೇವಲ ಹವ್ಯಾಸವಲ್ಲ, ಅದು ಜೀವನದ ಅವಿಭಾಜ್ಯ ಅಂಗವೆನ್ನುವಷ್ಟು ನೃತ್ಯವನ್ನು ಪ್ರೀತಿಸಿದ ಸೊನಾಲ್ ಮಾನ್ಸಿಂಗ್ ಅವರು ಪ್ರೊ. ಯು. ಎಸ್. ಕೃಷ್ಣರಾವ್, ಚಂದ್ರಭಾಗದೇವಿ, ಮುಂಬೈನ ಜಯಲಕ್ಷ್ಮಿ ಆಳ್ವಾಸ್ ಅವರಿಂದ ಭರತನಾಟ್ಯವನ್ನು ಅಭ್ಯಸಿಸಿದ್ದರು.
ಕೆಲುಚರಣ್ ಮೊಹಾಪಾತ್ರ ಅವರಿಂದ ಒಡಿಸ್ಸಿ ನೃತ್ಯ, ಅನಂತ್ ಚರಣ್ ಸಾಯಿ, ಪಾಲಾ ಸಂಗೀತ್ ಅವರಿಂದ ಚೌವ್ವಾ, ಪ್ರೊ. ಕೆ. ಜಿ. ಜಿಂಗೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವೆಂಪತಿ ಚಿನ್ನ ಸತ್ಯಂ ಅವರಿಂದ ಕೂಚಿಪುಡಿಯನ್ನು ಅಭ್ಯಾಸ ಮಾಡಿದ್ದ ಇವರು 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದರು. ಮೆಡಲ್ ಆಫ್ ಫ್ರೆಂಡ್ಶಿಪ್, ರಾಜೀವ್ ಗಾಂಧಿ ಎಕ್ಸೆಲೆನ್ಸ್ ಅವಾರ್ಡ್, ನೃತ್ಯ ಚೂಡಾಮಣಿ ಇನ್ನೂ ಹಲವು ಪ್ರಶಸ್ತಿಗಳು ಸಂದಿವೆ.
ಸೃಷ್ಟಿ ರಾಷ್ಟ್ರೀಯ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೇ 3ರಂದು ಗುರುವಾರ ಸಂಜೆ 6.20ಕ್ಕೆ ಸೃಷ್ಟಿ ಸಂಸ್ಥೆಯ ಡಾ. ಎ. ವಿ. ಸತ್ಯನಾರಾಯಣರವರ ನೃತ್ಯ ಸಂಯೋಜನೆಯ ಮಹಾನ್ ಬುದ್ಧ ಬ್ಯಾಲೆಟ್ ಪ್ರದರ್ಶನದ ನಂತರ ಸಂಜೆ 7.20ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.