ಮೂವತ್ತು ಕಲಾವಿದರು ಬಳಪದ ಕಲ್ಲುಗಳನ್ನು ಉಳಿಯಿಂದ ಕೆತ್ತಿ ಕೆತ್ತಿ ನಿರ್ಮಿಸಿದ ಸಮಾಜ ಸುಧಾರಕರ ಮೂರ್ತಿಗಳು ಅಲ್ಲಿ ನೋಡುಗರನ್ನು ಚಿಂತನೆಗೆ ಹಚ್ಚುತ್ತಿವೆ.
ಹದಿನೈದು ದಿನಗಳಲ್ಲಿ ಬುದ್ಧ, ಬಸವ, ಕಬೀರ, ಪೆರಿಯಾರ್, ನಾರಾಯಣಗುರು, ರಮಾಬಾಯಿ ಅಂಬೇಡ್ಕರ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್... ಹೀಗೆ ನಾಡಿನ ಹೆಸರಾಂತ ಸಮಾಜಸುಧಾರಕರ 14 ಪ್ರತಿಮೆಗಳು ಅಲ್ಲಿವೆ.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜಂಟಿಯಾಗಿ ಆಯೋಜಿಸಿರುವ 15 ದಿನಗಳ ‘ನಾಗಲೋಕ’ ಶಿಬಿರದ ನೋಟಗಳಿವು.
ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ 30 ಕಲಾವಿದರು ಪಾಲ್ಗೊಂಡಿದ್ದಾರೆ.
ರಾಜ್ಯದಲ್ಲಿ 70ರ ದಶಕದಲ್ಲಿ ಶೋಷಿತ ಸಮುದಾಯಗಳ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಡಲು ದಲಿತ ಸಂಘರ್ಷ ಸಮಿತಿ ಕಟ್ಟಿ ಬೆಳೆಸಿದ ಬಸವಲಿಂಗಪ್ಪ ಹಾಗೂ ಬಿ. ಕೃಷ್ಣಪ್ಪ ಅವರ ಶಿಲ್ಪಗಳನ್ನು ಸುಮನ್ ಬಿ. ಹಾಗೂ ಆನಂದ್ ಎಸ್ ಅವರು ಕೆತ್ತಿದ್ದಾರೆ.
‘ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಿಂದ ತರಿಸಿದ ಬಳಪದ ಕಲ್ಲುಗಳಿಂದ ಶಿಲ್ಪಗಳನ್ನು ಕೆತ್ತಲಾಗಿದೆ. ಅಂತಿಮ ಸ್ಪರ್ಶದ ಕೆಲಸ ನಡೆಯುತ್ತಿದ್ದು, ಶುಕ್ರವಾರದ (ಜೂನ್ 16) ವೇಳೆಗೆ ಪ್ರದರ್ಶನಕ್ಕೆ ಇಡಲಾಗುವುದು’ ಎನ್ನುತ್ತಾರೆ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರೊ.ಸಿ.ಬಿ. ಹೊನ್ನು ಸಿದ್ಧಾರ್ಥ.
**
ನಾಳೆ ಸಮಾರೋಪ
ಶಿಲ್ಪಗಳ ಲೋಕಾರ್ಪಣೆ–ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್.ಅರ್ಚನಾ, ಅತಿಥಿಗಳು– ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಮೂರ್ತಿ, ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸಿಂಹ, ವಸಂತಕುಮಾರ್. ಅಧ್ಯಕ್ಷತೆ–ಕುಲಸಚಿವ ಬಿ.ಕೆ.ರವಿ. ಸ್ಥಳ–ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ. ಮಧ್ಯಾಹ್ನ 3.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.