ಮಾನವ ದೇಹದ ಅತ್ಯಂತ ಪ್ರಮುಖ ಕೇಂದ್ರವಾಗಿರುವ ಹೃದಯಸ್ಥಾನದಲ್ಲಿ ಅನಾಹತ ಚಕ್ರ ನೆಲೆಸಿದೆ. ಹನ್ನೆರಡು ದಳಗಳ ಕಮಲದ ಹೂವನ್ನು ಹೋಲುವ ಅನಾಹತ ಚಕ್ರವು ಮನುಷ್ಯನ ಮೂಲಭೂತ ಗುಣಗಳಾದ ಪ್ರೀತಿ, ಪ್ರೇಮ, ದಯೆ, ಅನುಕಂಪ, ಸಂತೋಷ, ಕ್ಷಮೆ, ತಾಳ್ಮೆ, ತಿಳಿವಳಿಕೆ, ಪರಿಶುದ್ಧತೆ, ಆನಂದ ಮುಂತಾದವುಗಳ ಅಸ್ತಿತ್ವಕ್ಕೆ ಕಾರಣೀಭೂತವಾಗಿದೆ.
ಹಸಿರು ಬಣ್ಣವನ್ನು ಸಂಕೇತಿಸುವ ಅನಾಹತ ಚಕ್ರವು ಯಂ ಬೀಜಾಕ್ಷರವನ್ನು ಹೊಂದಿದೆ. ವಿಷ್ಣು, ಲಕ್ಷ್ಮೀ ಹಾಗೂ ಕೃಷ್ಣ ಈ ಚಕ್ರದ ಅಧಿದೇವತೆಗಳು. ಹುಟ್ಟಿದ ಮನುಷ್ಯನಿಗೆ ನಾಲ್ಕು ವರ್ಷದಿಂದ ಏಳು ವರ್ಷಗಳ ಅಂತರದಲ್ಲಿ ಈ ಚಕ್ರ ಸ್ಫುಟವಾಗುತ್ತದೆ.
ಅನಾಹತ ಚಕ್ರದ ಸುಪ್ತತೆಯಿಂದ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಚರ್ಮದ ಸಮಸ್ಯೆ, ಹೃದಯ ಮತ್ತು ಉಸಿರಾಟದ ತೊಂದರೆಗಳು, ರಕ್ತದೊತ್ತಡ, ಎದೆನೋವು, ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತವೆ.
ಅನಾಹತ ಚಕ್ರದ ಅರಳುವಿಕೆಯಿಂದಾಗಿ ಪ್ರೇಮ, ಕರುಣೆ, ಸತ್ಯ, ಶಿವ, ಸೌಂದರ್ಯಗಳು, ದೈವಿಕ ಗುಣಗಳು ಪ್ರಬಲಗೊಳ್ಳುತ್ತವೆ.
ಅರ್ಧ ಚಕ್ರಾಸನ, ಪರ್ವತಾಸನ, ತ್ರಿಕೋನಾಸನ, ಉಷ್ಟ್ರಾಸನ, ಅರ್ಧ ಮತ್ಸ್ಯೇಂದ್ರಾಸನ, ವಕ್ರಾಸನ, ಧನುರಾಸನ, ಚಕ್ರಾಸನ, ಅಧೋಮುಖ ಶ್ವಾನಾಸನ ಮುಂತಾದ ಯೋಗಾಸನಗಳು, ವಾಯುಮುದ್ರೆ, ಹೃದಯಮುದ್ರೆಗಳು, ಚಿನ್ಮುದ್ರೆಯಲ್ಲಿ ಸ್ಪಷ್ಟವಾಗಿ ಯಂ ಮಂತ್ರ ಪಠಣ, ನಮಸ್ಕಾರ ಮುದ್ರೆಯಲ್ಲಿ ಓಂಕಾರ ಇತ್ಯಾದಿಗಳು ಅನಾಹತ ಚಕ್ರದ ಸಮೃದ್ಧಿಗೆ ಕಾರಣವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.