ADVERTISEMENT

ಸಂಚಾರ ಪೊಲೀಸರಿಗೆ ಆರೋಗ್ಯ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಸಂಚಾರ ಪೊಲೀಸರಿಗೆ ಆರೋಗ್ಯ ಉಪನ್ಯಾಸ
ಸಂಚಾರ ಪೊಲೀಸರಿಗೆ ಆರೋಗ್ಯ ಉಪನ್ಯಾಸ   

ಮಾಲಿನ್ಯದ ವಿಷಯದಲ್ಲಿ ಅತಿ ಹೆಚ್ಚು ಹಾಗೂ ಕೆಟ್ಟ ಪರಿಣಾಮಗಳನ್ನು ಎದುರಿಸುವವರು ಸಂಚಾರ ಪೊಲೀಸರು. ಬಹುತೇಕ ಸಂದರ್ಭಗಳಲ್ಲಿ ಅವರಿಗೆ ಅವರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಅರಿವೂ ಇರದು. ಹೀಗಾಗಿ ಸಂಚಾರ ಪೊಲೀಸರ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಿರಲಿ ಎಂಬ ಕಾಳಜಿಯೊಂದಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಆರೋಗ್ಯ ಉಪನ್ಯಾಸ ಏರ್ಪಡಿಸಿತ್ತು.

`ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರು ಮೂಲಸೌಕರ್ಯ ಹಾಗೂ ಮಾಲಿನ್ಯದ ವಿಷಯದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಏರುತ್ತಲೇ ಇದೆ. ಇದು ತೀವ್ರತರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ, ಚರ್ಮ ರೋಗ ಹಾಗೂ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆಗಳು. ನೌಕರಿಯ ಪರಿಯೇ ಹೀಗಿರುವಾಗ ನಗರದ ಸಂಚಾರ ಪೊಲೀಸರು ನಿತ್ಯ ತಮ್ಮನ್ನು ಮಾಲಿನ್ಯಕ್ಕೆ ಒಡ್ಡಿಕೊಂಡು ಕಾಯಿಲೆಗೆ ಹತ್ತಿರವಾಗುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸಂಚಾರ ಪೊಲೀಸರಿಗೆ ಆರೋಗ್ಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ~ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕ ಜೆರೆಮಿ ಡಿಸೋಜಾ.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಎಂ.ಎಂ.ಮಹಾದೇವಯ್ಯ ಹಾಗೂ ಎಸಿಪಿ ನರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪಲ್ಮೊನಾಲಜಿಸ್ಟ್ ಡಾ. ಹಿರೇಣ್ಣಪ್ಪ ಅವರು ಉಪನ್ಯಾಸದಲ್ಲಿ ಪಾಲ್ಗೊಂಡ ಪೊಲೀಸರಿಗೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಹೇಗೆ ಅವರು ಮಾಲಿನ್ಯಕ್ಕೆ ತೆರೆದುಕೊಳ್ಳಲಿದ್ದಾರೆ, ಅದರಿಂದ ಆರೋಗ್ಯದ ಮೇಲಾಗುವ ದೀರ್ಘಕಾಲಿಕ ಪರಿಣಾಮಗಳನ್ನು ಯಾವ ಮಾರ್ಗೋಪಾಯಗಳಿಂದ ತಗ್ಗಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಡಿಯಲ್ಲಿ ಆಸ್ಪತ್ರೆಯು ಪ್ರತಿಯೊಬ್ಬ ಸಂಚಾರ ಪೊಲೀಸರಿಗೆ ತಲಾ 25ರಂತೆ 5,000 ಮುಖಗವಸುಗಳನ್ನು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT