ನಗರದ ಜನತೆ ಹೊಸ ವರ್ಷವನ್ನು ಮೋಜು, ಸಂತೋಷ ಕೂಟಗಳನ್ನು ಏರ್ಪಡಿಸುವ ಮೂಲಕ ಬರಮಾಡಿಕೊಂಡರು. ಆದರೆ `ಹೊಂಬಾಳೆ ಪ್ರತಿಭಾರಂಗ~ ಸಂಸ್ಥೆಯು ನೂತನ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸಿತು.
`ಹೊಸ ವರ್ಷವೇ ಬಾ...~ ಎಂಬ ಗಾಯನ ಕಾರ್ಯಕ್ರಮದ ಮೂಲಕ 2012ನೇ ವರ್ಷಕ್ಕೆ ಸ್ವಾಗತ ಕೋರಿದರು. ಕನ್ನಡ ನಾಡು ನುಡಿಗೆ ಕೀರ್ತಿ ತಂದ ನಮ್ಮ ಹೆಮ್ಮೆಯ ಕವಿಗಳ ಗೀತೆಗಳಿಗೆ ಗಾಯನದ ಇಂಪು ನೀಡಿದರು.
ಪಂಚಮ್ ಹಳಿಬಂಡಿ ಅವರು `ಜಯದೇವ ಜಯದೇವ~ (ದ.ರಾ.ಬೇಂದ್ರೆ), ಉಪಾಸನಾ ಮೋಹನ್ ಹಾಡಿದ `ಹಾಡು ಹಳೆಯದಾದರೆನು ಭಾವ ನವನವೀನ~ (ಜಿ.ಎಸ್.ಎಸ್), `ಇಳಿದು ಬಾ ತಾಯೆ ಇಳಿದು ಬಾ~ (ದ.ರಾ.ಬೇಂದ್ರೆ), `ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು~ (ಬಿ.ಆರ್.ಎಲ್) ಗೀತೆಗಳು ಸಂಗೀತ ಸಂಜೆಯನ್ನು ಮತ್ತಷ್ಟು ರಂಗೇರಿಸಿತ್ತು.
ಎನ್. ರಾಕೇಶ್, ಎಲ್.ಆರ್.ಪದ್ಮಿನಿ ಹಾಗೂ ಹೊಂಬಾಳೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಗೀತೆಗಳು ಸಂಗೀತಾಸಕ್ತರ ಮನತಣಿಸಿದವು.
ರಾಜೀವ್ ಎಸ್.ಜೋಯಿಸ್ (ಕೀಬೋರ್ಡ್), ಎಲ್.ಎನ್.ವಸಂತ ಕುಮಾರ್(ಕೊಳಲು), ಆರ್.ಲೋಕೇಶ್ (ತಬಲಾ), ವಿ.ಯಶೋಧರ (ರಿದಂಪ್ಯಾಡ್) ವಾದ್ಯ ಸಹಕಾರ ನೀಡಿದರು. ಹೊಂಬಾಳೆ ಫಲ್ಗುಣ, ಸಪ್ತಕದ ಅಧ್ಯಕ್ಷ ಸಿ.ಎಂ. ಗಂಗಾಧರಯ್ಯ, ಭಾಸ್ಕರ್ ಹೆಬ್ಬಾರ್, ಎಂ.ಬಿ.ಶಶಿಧರ್, ಎಸ್.ರವಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.