‘ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರಥಮ ಆದ್ಯತೆಯ ಮೇಲೆ ಮೂಲಭೂತ ಸೌಕರ್ಯ ಒದಗಿಸಿ’ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಅವರಿಗೆ ಫೆ.6ರಂದು ಪತ್ರಬರೆದು ಸೂಚಿಸಿದ್ದಾರೆ.
‘ಪ್ರಜಾವಾಣಿ’ಯ ಮೆಟ್ರೊ ಪುರವಣಿಯಲ್ಲಿ ಫೆ.6ರಂದು ಪ್ರಕಟವಾಗಿದ್ದ ‘ಹೀಗಾಗಿದೆ ನೋಡಿ ಮೆಜೆಸ್ಟಿಕ್’ ಲೇಖನದ ಬಗ್ಗೆ ಪ್ರಸ್ತಾಪಿಸಿರುವ ಅವರು, ಲೇಖನದಲ್ಲಿ ಉಲ್ಲೇಖಿಸಿದ್ದ ‘ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಣ್ಣ ಮಕ್ಕಳನ್ನು ಸಂತೈಸಲು, ಹಾಲೂಡಿಸುವ ತಾಯಂದಿರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ಅವಶ್ಯಕತೆ ಇದೆ. ನಿಲ್ದಾಣದ ಶೌಚಾಲಯಗಳ ನಿರ್ವಹಣೆಯಲ್ಲಿ ಸಮಸ್ಯೆ ಇದೆ’ ಎಂಬ ಅಂಶಗಳನ್ನು ಪತ್ರದಲ್ಲಿ ನಮೂದಿಸಿದ್ದಾರೆ.
‘ಬಸ್ ನಿಲ್ದಾಣದಲ್ಲಿ ವ್ಯಾಪಾರಸ್ಥರಿಂದ ಪ್ರಯಾಣಿಕರ ಮೇಲೆ ಶೋಷಣೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ರತ್ನಪ್ರಭ ಸೂಚಿಸಿದ್ದಾರೆ.
‘ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ನಿಲ್ದಾಣಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಮತ್ತು ಮಕ್ಕಳ ಆರೈಕೆ ಕೇಂದ್ರ ಬೇಕು’ ಎಂಬುದು ಮಹಿಳಾ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು.
ಮೆಟ್ರೊ ಪುರವಣಿಯಲ್ಲಿ ‘ಹೀಗಾಗಿದೆ ನೋಡಿ ಮೆಜೆಸ್ಟಿಕ್’ ಲೇಖನ ಓದಿದ ಓದುಗರು ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಿದ್ದಾರೆ. ಮೆಟ್ರೊ ಪುರವಣಿಯ ಫೇಸ್ಬುಕ್ ಪುಟದಲ್ಲಿ (facebook.com/prajavanimetro) 1.43 ಲಕ್ಷ ಮಂದಿ ಲೇಖನ ನೋಡಿದ್ದಾರೆ. 62 ಮಂದಿ ತಮ್ಮ ವಾಲ್ಗಳಿಗೆ ಶೇರ್ ಮಾಡಿಕೊಂಡಿದ್ದಾರೆ. ವೆಬ್ಸೈಟ್ನಲ್ಲಿ (prajavani.net/metro) ಹಲವು ಓದುಗರು ಪ್ರತಿಕ್ರಿಯೆ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.