ರಕ್ತದ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವ ಮಹತ್ವದ ಉದ್ದೇಶದಿಂದ ಆಸ್ಟರ್ ಸಿಎಂಐ ಆಸ್ಪತ್ರೆ ಶುಕ್ರವಾರ ರಕ್ತ ಆಕರಕೋಶ ದಾನಿಗಳ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದೆ.
ದೇಶದ ಮುಂಚೂಣಿ ಆಕರಕೋಶ ನೋಂದಣಿ ಸಂಸ್ಥೆ ‘ದಾತ್ರಿ‘ ಈ ಮಹತ್ವದ ಕೆಲಸಕ್ಕೆ ಆ್ಯಸ್ಟರ್ ಜತೆ ಕೈಜೋಡಿಸಿದೆ.
ದೇಶದಲ್ಲಿ ಪ್ರತಿವರ್ಷ ಎರಡು ಸಾವಿರ ಆಕರಕೋಶ ಕಸಿ ನಡೆಯುತ್ತಿವೆ. ರಕ್ತ ಕ್ಯಾನ್ಸರ್, ಲ್ಯುಕೇಮಿಯಾ ಮತ್ತು ರಕ್ತ ಸಂಬಂಧಿ ಖಾಯಿಲೆಗೆ ಪರಿಹಾರ ಹುಡುಕಲು ವರ್ಷಕ್ಕೆ ಕನಿಷ್ಠ 80 ಸಾವಿರದಿಂದ 1 ಲಕ್ಷ ಕಸಿ ಅಗತ್ಯವಿದೆ. ಆಕರಕೋಶ ನೋಂದಣಿ ಇಂತಹ ಅನೇಕ ರೋಗಿಗಳ ಬಾಳಿನಲ್ಲಿ ಬೆಳಕು ನೀಡಬಲ್ಲದು ಎಂದು ಆಸ್ಪತ್ರೆಯ ರಕ್ತತಜ್ಞ ಡಾ. ವಿಜಯ್ ಅಗರವಾಲ್ ಹೇಳಿದರು.
ಭಾರತದಲ್ಲಿ ಇದುವರೆಗೂ ನಾಲ್ಕು ಲಕ್ಷ ದಾನಿಗಳು ಹೆಸರು ನೋಂದಾಯಿಸಿದ್ದಾರೆ. ಆಕರಕೋಶ ಅಭಿಯಾನದಲ್ಲಿ ಹೆಸರು ನೋಂದಾಯಿಸಿದರೆ ದಾನಿಗಳ ಹೆಸರು, ವಿಳಾಸ ಹಾಗೂ ಇನ್ನಿತರ ಮಾಹಿತಿ 60 ವರ್ಷ ಆಸ್ಪತ್ರೆ ದಾಖಲೆಗಳಲ್ಲಿ ಜೋಪಾನವಾಗಿರಲಿವೆ.
ಅರ್ಜುನ್ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ರೀತ್ ಅಬ್ರಾಹಂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆಕರಕೋಶ ದಾನ ಪಡೆದು ಜೀವ ಉಳಿಸಿಕೊಂಡ ರೋಗಿಗಳು ತಮ್ಮ ಅನುಭವ ಹಂಚಿಕೊಂಡರು. ಅನೇಕ ದಾನಿಗಳು ಹೆಸರು ನೋಂದಣಿ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.