ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಇದೇ 2ರಂದು ‘ಪಾಂಡುಟೂನ್ಸ್’ ಶೀರ್ಷಿಕೆಯಡಿಯಲ್ಲಿ ಕಾರ್ಟೂನಿಸ್ಟ್ ಬಿ.ವಿ. ಪಾಂಡುರಂಗ ರಾವ್ ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ.
ಮೈಸೂರಿನಲ್ಲಿ ಹುಟ್ಟಿದ ಪಾಂಡುರಂಗ ರಾವ್, ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರರು. ಅವರು ಭಿಲೈ ಉಕ್ಕು ಕಾರ್ಖಾನೆಯಲ್ಲಿ 36 ವರ್ಷಗಳ ಸುದೀರ್ಘಕಾಲ ಕೆಲಸ ಮಾಡಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿ ನಿವೃತ್ತರಾಗಿದ್ದಾರೆ. ಅವರು 2001ರಿಂದ 2005 ರವರೆಗೆ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರೂ ಆಗಿದ್ದರು.
ಹವ್ಯಾಸಿ ವ್ಯಂಗ್ಯಚಿತ್ರಕಾರರಾದ ಪಾಂಡುರಂಗ ರಾವ್ ಅವರ ವ್ಯಂಗ್ಯಚಿತ್ರಗಳು ಹಿಂದಿ ಭಾಷೆಯ ‘ದೈನಿಕ ಭಾಸ್ಕರ್’ ಮತ್ತು ‘ನವಭಾರತ್’ ಸೇರಿದಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ 14 ಬಾರಿ, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ 10 ಬಾರಿ ಪ್ರವೇಶ ಪಡೆದು ದಾಖಲೆ ಸಾಧಿಸಿದ್ದಾರೆ. ಪಾಂಡುರಂಗ ರಾವ್ ಅವರ ವ್ಯಂಗ್ಯಚಿತ್ರಗಳು ಈಗಾಗಲೇ ನವದೆಹಲಿ, ಮುಂಬೈ, ಭಿಲೈ, ದುರ್ಗ, ಜಮಷೆಡ್ಪುರ, ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿವೆ.
‘ಪಾಂಡುಟೂನ್ಸ್’ಬಿ.ವಿ. ಪಾಂಡುರಂಗ ರಾವ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ: ಉದ್ಘಾಟನೆ–ಕೆ.ಆರ್. ಸ್ವಾಮಿ. ಆಯೋಜನೆ–ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ. ಸ್ಥಳ– ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ. ಶನಿವಾರ ಬೆಳಿಗ್ಗೆ 11. ಪ್ರದರ್ಶನವು ಮಾರ್ಚ್ 23ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6. ಉಚಿತ ಪ್ರವೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.