‘ಮತ್ತೊಂದು ಅವಕಾಶ ಕೊಡಿ’
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರ ಪತ್ನಿ ಡಾಟಿ ಅವರು ತಮ್ಮ ಪತಿಗೆ ಮತ್ತೊಂದು ಅವಕಾಶ ಕೊಡಿ ಎಂದು ಮತ ಯಾಚಿಸುತ್ತಿದ್ದಾರೆ.
ಮೂಲತಃ ಕೊಡಗಿನವರಾದ ಡಾಟಿ ಅವರಿಗೆ ಸದಾನಂದ ಗೌಡರನ್ನು ಮದುವೆಯಾದ ನಂತರ ರಾಜಕಾರಣ, ಚುನಾವಣೆ ಮತ್ತು ಪ್ರಚಾರ ಸಹಜವಾಗಿ ಜೀವನದಲ್ಲಿ ಬೆರೆತು ಹೋಗಿವೆ. ಪ್ರಚಾರಕ್ಕಾಗಿ ತವರು ಮನೆ ಕೊಡಗಿನಿಂದ ಸಂಬಂಧಿಗಳ ಹಿಂಡು ಬಂದಿಳಿದಿದೆ. ಊಟ, ಉಪಚಾರದ ಹೊಣೆಯನ್ನು ಅವರಿಗೆ ವಹಿಸಿರುವ ಡಾಟಿ ಅವರು ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಡುತ್ತಾರೆ. ಪುತ್ರ ಕಾರ್ತಿಕ್ ಮತ್ತು ಸೊಸೆ ಕೂಡ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಕೇಂದ್ರ ಸಚಿವರಾಗಿ ಸದಾನಂದ ಗೌಡರು ಮಾಡಿದ ಅಭಿವೃದ್ಧಿ ಕೆಲಸಗಳು ಪ್ರಚಾರದ ಪ್ರಮುಖ ಅಂಶಗಳು. ಸಂಸದರ ಅನುದಾನವನ್ನು ಸಮರ್ಪಕವಾಗಿ ಬಳಸಿದ ಹೆಗ್ಗಳಿಕೆ ತಮ್ಮ ಯಜಮಾನರಿಗೆ ಸಲ್ಲುತ್ತದೆ ಎಂದು ಡಾಟಿ ಅವರು ಪ್ರಚಾರಕ್ಕೆ ಹೋದಲೆಲ್ಲ ಒತ್ತಿ ಹೇಳುತ್ತಾರೆ.
ಜನರ ಪ್ರತಿಕ್ರಿಯೆ ಉತ್ತಮವಾಗಿದ್ದು ಸದಾನಂದ ಗೌಡರು ಹೆಚ್ಚು ಮತಗಳ ಅಂತರಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಕಳೆದ 27 ದಿನಗಳಲ್ಲಿ ಬಿರು ಬಿಸಿಲು ಲೆಕ್ಕಿಸದೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿದ್ದಾರೆ. ಪಕ್ಷದ ಮಹಿಳಾ ಕಾರ್ಯಕರ್ತೆಯರ ಜೊತೆ ಬೆಳಿಗ್ಗೆ ಉದ್ಯಾನ, ಅಪಾರ್ಟ್ಮೆಂಟ್ಗಳಿಗೆ ತೆರಳುವುದು ಮತ್ತು ಗುಂಪು ಸಭೆಗಳನ್ನು ನಡೆಸುವುದು ಅವರ ನಿತ್ಯದ ಕಾಯಕವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.