ಮಾರತಹಳ್ಳಿಯಿಂದ ವರ್ತೂರು ಕಡೆಗೆ ಹೋಗುವ ಮಾರ್ಗದಲ್ಲಿ ಬರುವ ತುಬರಹಳ್ಳಿಯ ವಿಬ್ಗಯಾರ್ ಸ್ಕೂಲ್ ಹತ್ತಿರದ ರಸ್ತೆಗಳ ಸ್ಥಿತಿ ಇದು. ಇಂಥ ಎರಡು ದೊಡ್ಡ ಶಾಲೆಗಳಿರುವ ಈ ಪ್ರದೇಶದಲ್ಲಿ ಸ್ಕೂಲ್ ಬಸ್ಗಳ ಓಡಾಟ ಹೆಚ್ಚಿರುತ್ತದೆ. ನಿತ್ಯ ಸಾವಿರಾರು ಮಕ್ಕಳನ್ನು ಸಾಗಿಸಲು ಈ ರಸ್ತೆ ಸಂಚಾರ ಅನಿವಾರ್ಯ. ಸ್ಕೂಲ್ ಬಸ್ಗಳನ್ನು ನಂಬಿ ಪಾಲಕರು ತಮ್ಮ ಮುಗ್ಧ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅವರು ಸುರಕ್ಷಿತವಾಗಿ ಮನೆಗೆ ಸೇರುವ ತನಕ ಅವರ ಆತಂಕ ಮಾತ್ರ ಹಾಗೇ ಉಳಿದುಕೊಂಡಿರುತ್ತದೆ ದಿನವಿಡಿ.
ಇದಲ್ಲದೇ ಇದೇ ರಸ್ತೆಯ ಆಸುಪಾಸು ವಾಸವಿರುವ ಸುಮಾರು ಹತ್ತು ಸಾವಿರ ನಿವಾಸಿಗಳಿಗೆ ಇದೊಂದೇ ಬಳಕೆಯ ರಸ್ತೆ. ರಸ್ತೆ ತುಂಬ ದೊಡ್ಡ ಗುಂಡಿಗಳು. ಮಳೆ ಆದಾಗ ರಸ್ತೆ ಮೇಲೆ ಪುಟ್ಟ ಕೆರೆಗಳು ರೂಪುಗೊಳ್ಳುತ್ತವೆ. ಸಂಚಾರಕ್ಕೆ ದ್ವಿಚಕ್ರವಾಹನ, ಕಾರು, ಸ್ಕೂಟರ್ ಮತ್ತು ಸೈಕಲ್ ಬಳಸುವ ಇಲ್ಲಿನ ನಿವಾಸಿಗಳ ಸ್ಥಿತಿ ಅಯೋಮಯ. ಕೊಂಚ ವ್ಯತ್ಯಾಸವಾದರೂ ಅನಾಹುತ ತಪ್ಪಿದ್ದಲ್ಲ. ಇದಕ್ಕೆ ಹೊಂದಿಕೊಂಡಂತೆ ಕೆಲವೇ ನೂರು ಮೀಟರ್ಗಳಷ್ಟು ದೂರಕ್ಕೆ ವರ್ತೂರು ಮುಖ್ಯ ರಸ್ತೆ ಇದೆ. ಇದರ ನಡುವಿನ ಒಂದು ಚಿಕ್ಕ ಪಟ್ಟಿಯಂತಿರುವ ಜಾಗ ವಿವಾದವೋ ಏನೋ ಅಂತೂ ಇಲ್ಲಿ ರಸ್ತೆ ಎಷ್ಟೋ ಸಮಯದಿಂದ ಅದ್ವಾನ ಸ್ಥಿತಿಯಲ್ಲಿದೆ. ಮಳೆ ಸುರಿದಾಗೆಲ್ಲ ಇಲ್ಲಿ ಬರಿ ಕೆಸರಿನಿಂದ ಕಚಿ ಪಿಚಿ ಎನ್ನುವಂತಿರುತ್ತದೆ.
ಇದನ್ನು ಸರಿಪಡಿಸಲು ಅದೆಷ್ಟು ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ನಿತ್ಯ ಸುರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು. ಸಂಬಂಧಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳಬಾರದೇ?
ಇಮ್ತಿಯಾಜ್ ಜಮಾದಾರ್,ತುಬರಹಳ್ಳಿ, ಕುಮಾರಪಲ್ಲಿ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.