ADVERTISEMENT

ರಸ್ತೆ ಸುರಕ್ಷತೆ ನಿಯಮ: ತಂಡದ ಕಾಳಜಿ

ವಿಎಫ್‌ಸಿ ತಂಡದ ಕಳಕಳಿಯ ಕೆಲಸ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 19:30 IST
Last Updated 31 ಡಿಸೆಂಬರ್ 2019, 19:30 IST
ಕುಡಿದ ಮತ್ತಿನಲ್ಲಿ ವಾಹನ ಚಾಲನೆ: ವಿಎಫ್‌ಸಿ ತಂಡದ ಕಳಕಳಿಯ ಕೆಲಸ
ಕುಡಿದ ಮತ್ತಿನಲ್ಲಿ ವಾಹನ ಚಾಲನೆ: ವಿಎಫ್‌ಸಿ ತಂಡದ ಕಳಕಳಿಯ ಕೆಲಸ   

ಡಿಸೆಂಬರ್‌ ತಿಂಗಳಲ್ಲಿ ಚುಮುಚುಮು ಚಳಿಯಷ್ಟೆ ಅಲ್ಲ,ಅಪಘಾತಗಳ ಸಂಖ್ಯೆಯೂ ಹೆಚ್ಚು ಎಂಬ ಮಾತಿದೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆಯ ಸಂಭ್ರಮದ ಜತೆಗೆ ಅಜಾಗರೂಕತೆಯ ಮನಸ್ಥಿತಿಯೊಂದು ಜತೆಯಾಗಿ ಬಿಟ್ಟರೆ ಅಪಘಾತಗಳು ಎಗ್ಗಿಲ್ಲದಂತೆ ನಡೆಯುತ್ತವೆ.

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ, ಪ್ರಾಣಕ್ಕೆ ಅಪತ್ತು ತಂದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು‘ವಾಲಂಟಿಯರ್ಸ್‌ ಫಾರ್‌ ಕಾಸ್‌’ (volunteers For Cause) ಸ್ವಯಂಸೇವಾ ತಂಡವೊಂದು ನಗರದ ಬೇರೆ ಬೇರೆ ಭಾಗಗಳಲ್ಲಿ ಅಭಿಯಾನ ನಡೆಸುತ್ತಿದೆ.

ಒಂದು ತಿಂಗಳಿನಿಂದ ನಗರದ ಪ್ರಮುಖ ಬೀದಿಗಳಲ್ಲಿ ಭಿತ್ತಿಪತ್ರ, ಮೂಕಾಭಿನಯ, ಸಣ್ಣ ಬೀದಿನಾಟಕಗಳ ಮೂಲಕ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದೆ.

ADVERTISEMENT

ಹೊಸ ವರ್ಷದ ಸಂದರ್ಭದಲ್ಲಿ ಅಪಘಾತಗಳ ಸುದ್ದಿ ಹೆಚ್ಚು ಕೇಳುತ್ತೇವೆ. ಗುದ್ದೋಡಿದ ಪ್ರಕರಣಗಳೇ ಹೆಚ್ಚು. ಸಂಭ್ರಮದ ಅಮಲಿನಲ್ಲಿರುವವರಿಗೆ ಅಪಾಯದ ಬಗ್ಗೆಯೂ ತಿಳಿ ಹೇಳಿದ್ದೇವೆ ಎನ್ನುತ್ತಾರೆವಿಎಫ್‌ಸಿ ತಂಡದ ಪ್ರಸಾದ್‌.

ವಿಎಫ್‌ಸಿ ತಂಡವನ್ನು ಸಮಾನ ಮನಸ್ಕ ಗೆಳೆಯರಾದ ಪ್ರಸಾದ್‌, ಸುರೇಂದ್ರನಾಥ್‌ ಸೇರಿ 12 ಜನ ಗೆಳೆಯರು 5 ವರ್ಷದ ಹಿಂದೆ ಆರಂಭಿಸಿದರು. ಈ ತಂಡದ ಮುಖ್ಯ ಉದ್ದೇಶವೇ ಅಪಘಾತ, ರಸ್ತೆ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ಈಗ ಈ ತಂಡದಲ್ಲಿ ಸುಮಾರು 200ಕ್ಕೂ ಹೆಚ್ಚು ಸದಸ್ಯರಿದ್ದಾರೆ. ವಾರಾಂತ್ಯ, ಬಿಡುವಿನ ವೇಳೆಯಲ್ಲಿ ನಗರದ ನಾನಾ ಭಾಗಗಳಿಗೆ ತೆರಳಿ ಭಿತ್ತಿಪತ್ರಗಳು, ನಾಟಕಗಳ ಮೂಲಕ ಜಾಗೃತಿ ಸಂದೇಶಗಳನ್ನು ಜನರಿಗೆ ತಲುಪಿಸುತ್ತಾರೆ.

ಈ ತಂಡ ನಗರದ ಬೀದಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಸೀಟ್‌ ಬೆಲ್ಟ್‌ ಮಹತ್ವ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ , ರಸ್ತೆ ನಿಯಮಗಳ ಪಾಲನೆ, ಹಾರ್ನ್‌ ಮಾಡದಂತೆ, ಆಗಾಗ ವಾಹನಗಳ ಹೊಗೆ ತಪಾಸಣೆ ಮಾಡುವಂತೆ, ಆ್ಯಂಬುಲೆನ್ಸ್‌ಗೆ ಸೈಡ್‌ ಬಿಟ್ಟುಕೊಡುವ ಬಗ್ಗೆಯೂ ಅರಿವು
ಮೂಡಿಸುತ್ತದೆ.

100ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ರಸ್ತೆಯಲ್ಲಿ ಹೆಲ್ಮೆಟ್‌ ಧರಿಸಿದ ಬೈಕ್‌ ಸವಾರರಿಗೆ ಹೂ ಗುಚ್ಛ ಕೊಟ್ಟು ಪ್ರೋತ್ಸಾಹಿಸಿದರೆ, ಹೆಲ್ಮೆಟ್‌ ಧರಿಸದವರಿಗೆ ನಯವಾಗಿ ಹೆಲ್ಮೆಟ್‌ ಧರಿಸುವಂತೆ ಮನವೊಲಿಸಲಾಗುತ್ತಿದೆ.

‌‌ಈಗ ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುವ ಸಂತಸದಲ್ಲಿದ್ದಾರೆ. ಹೊಸ ವರುಷದ ಸಂಭ್ರಮ ಇನ್ನೂ ಕೆಲ ದಿನ ಇರುತ್ತದೆ. ಅದರಲ್ಲೂ ಯುವಕ, ಯುವತಿಯರು ರಾತ್ರಿ ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲೇ ವಾಹನ ಚಲಾಯಿಸುತ್ತಾರೆ. ಮನೆಯಲ್ಲೇ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಪಬ್‌ಗಳಲ್ಲಿ ಪಾರ್ಟಿ ನಂತರ ಟ್ಯಾಕ್ಸಿಗಳಲ್ಲಿ ಮನೆಗೆ ತೆರಳಿ ಎನ್ನುವುದು ತಂಡದ ಕಳಕಳಿಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.