
ದುಬೈ ಏರ್ಶೋನಲ್ಲಿ ಭಾರತ ನಿರ್ಮಿತ ತೇಜಸ್ ಯುದ್ಧ ವಿಮಾನ ಪತನಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ತುಣುಕೊಂದು ಹರಿದಾಡುತ್ತಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ತೇಜಸ್ ಯುದ್ಧವಿಮಾನದ ವಿರುದ್ಧವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊದ ತುಣುಕು ಅದು. ‘ಈ ವಿಮಾನವನ್ನು ವಾಯುಪಡೆಗೆ ಸೇರಿಸಬೇಡಿ ಎಂದು ನಾನು ಭಾರತ ಸರ್ಕಾರಕ್ಕೆ ಈ ಹಿಂದೆಯೇ ಹೇಳಿದ್ದೆ. ಆದರೆ, ನಮ್ಮ ಮಾತನ್ನು ಅವರು ಕೇಳಲಿಲ್ಲ. ನೋಡಿ ಇವತ್ತು ಏನಾಗಿದೆ? ಇದು ವಿಮಾನ ಅಲ್ಲ. ಸಮೋಸ. ಸಮೋಸಗಳು ಹಾರಾಡುವುದಕ್ಕೆ ಇರುವುದಲ್ಲ’ ಎಂದು ಸಿಂಗ್ ಅವರು ಹೇಳುತ್ತಿರುವುದು ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು.
ವಿಡಿಯೊದ ಕೀಫ್ರೇಮ್ ಒಂದನ್ನು ಗೂಗಲ್ ಲೆನ್ಸ್ನಲ್ಲಿ ಹಾಕಿ ಹುಡುಕಿದಾಗ ಇಂಡಿಯಾ ಟುಡೇ ಗ್ಲೋಬಲ್ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೊ ಸಿಕ್ಕಿತು. ವಾಯುಪಡೆ ಮುಖ್ಯಸ್ಥ ಮಾತಾನಾಡುವ ವಿಡಿಯೊ ಅದಾಗಿದ್ದು, ಜಾಲತಾಣಗಳಲ್ಲಿ ಹಂಚಲಾಗುತ್ತಿರುವ ವಿಡಿಯೊದ ರೀತಿಯಲ್ಲೇ ಇತ್ತು. 93ನೇ ಭಾರತೀಯ ವಾಯು ಪಡೆ ದಿನದ ಅಂಗವಾಗಿ ಎ.ಪಿ.ಸಿಂಗ್ ಅವರು ಸುದ್ದಿಗೋಷ್ಠಿ ಮಾಡಿದ್ದ ವಿಡಿಯೊ ಅದಾಗಿತ್ತು. ಪೂರ್ತಿ ವಿಡಿಯೊವನ್ನು ಪರಿಶೀಲಿಸಿದಾಗ, ಈಗ ಹರಿದಾಡುತ್ತಿರುವ ವಿಡಿಯೊದಲ್ಲಿ ಇರುವಂತೆ ಅವರು ಹೇಳಿದ್ದು ಕಂಡು ಬರಲಿಲ್ಲ. ಅನುಮಾನ ಬಂದು, ವಿಡಿಯೊದಲ್ಲಿರುವ ಧ್ವನಿಯನ್ನು ಪ್ರತ್ಯೇಕಿಸಿ ರೆಸೆಂಬಲ್ ಎಐ ಪತ್ತೆ ಟೂಲ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಕೃತಕವಾಗಿ ಸೃಷ್ಟಿಸಿದ ಧ್ವನಿ ಎಂಬುದು ದೃಢಪಟ್ಟಿತು. ವಾಯು ಪಡೆ ಮುಖ್ಯಸ್ಥ ಸಿಂಗ್ ಅವರು ಏರ್ ಶೋ ದುರಂತದ ಬಗ್ಗೆ ಮಾತನಾಡಿದ್ದಾರೆಯೇ ಎಂದು ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ, ವಾಯುಪಡೆಯು ತನ್ನ ‘ಎಕ್ಸ್’ ಖಾತೆಯಲ್ಲಿ ಮಾಡಿದ ಪೋಸ್ಟ್ ಮಾತ್ರ ಸಿಕ್ಕಿತು. ವಾಯುಪಡೆ ಮುಖ್ಯಸ್ಥರು ತೇಜಸ್ ವಿರುದ್ಧವಾಗಿ ಮಾತನಾಡಿರುವಂತೆ ಎಐ ಮೂಲಕ ವಿಡಿಯೊ ಸೃಷ್ಟಿಸಿ ತಪ್ಪಾಗಿ ಹಂಚಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.