‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ಬಿತ್ನೂರ್ ಎಂಬಲ್ಲಿ ಸಮಾಜವಾದಿ ಪಕ್ಷದ ನಾಯಕರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾರೆ. ಅವರು ‘ಸೈಕಲ್ ದಬಾಕೆ, ಪಾಕಿಸ್ತಾನ ಬನಾನಾ ಹೇ’ (ಸೈಕಲ್ ಚಿಹ್ನೆ ಒತ್ತಿ, ಪಾಕಿಸ್ತಾನವನ್ನು ಸೃಷ್ಟಿಸಿ) ಎಂದು ಘೋಷಣೆ ಕೂಗಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಮತ ನೀಡಬೇಡಿ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ.ಸತ್ಯಂ ಕುಮಾರ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಸೇರಿ ಹಲವರು ಈ ಟ್ವೀಟ್ ಮತ್ತು ವಿಡಿಯೊವನ್ನು ರಿಟ್ವೀಟ್ ಮಾಡಿದ್ದರು. ಈ ಟ್ವೀಟ್ನಲ್ಲಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ. ‘ಬಿತ್ನೂರ್ನಲ್ಲಿ ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ‘ಸೈಕಲ್ ದಬಾಕೆ, ಮಾತಿ ಚೋರ್ ಬಗಾನಾ ಹೇ’ ಎಂದು (ಸೈಕಲ್ ಚಿಹ್ನೆ ಒತ್ತಿ, ಭೂಗಳ್ಳನನ್ನು ಓಡಿಸಬೇಕು) ಎಂದು ಘೋಷಣೆ ಕೂಗಿದ್ದಾರೆ. ಬಿತ್ನೂರ್ನ ಬಿಜೆಪಿ ಶಾಸಕ ಅಭಿಜಿತ್ ಸಿಂಗ್ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪಗಳಿದ್ದು, ಅದನ್ನು ಗುರಿ ಮಾಡಿ ಈ ಘೋಷಣೆ ಕೂಗಲಾಗಿದೆ. ಬಿಜೆಪಿ ನಾಯಕರು ವಿಡಿಯೊವನ್ನು ತಿರುಚಿ, ಸುಳ್ಳುಸುದ್ದಿ ಹರಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಗೊತ್ತಾದ ತಕ್ಷಣ ಸಂಬಿತ್ ಪಾತ್ರಾ ಅವರು ತಮ್ಮ ಟ್ವೀಟ್ ಅಳಿಸಿದ್ದಾರೆ’ ಎಂದು ದಿ ಲಾಜಿಕಲ್ ಇಂಡಿಯನ್ ತನ್ನ ಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.