ಹಿಂದೂ ಧರ್ಮದ ಸಾಧುವೊಬ್ಬರು ಮುಸ್ಲಿಮರಿಗೆ ಊಟ ಬಡಿಸುತ್ತಿರುವ ಫೋಟೊವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರಲ್ಲಿ ಈ ಫೋಟೊದಲ್ಲಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ‘ಇಸ್ಕಾನ್ ದೇವಾಲಯದ ಪ್ರಮುಖರಾದ ಸ್ವಾಮಿ ನಿತ್ಯ ದಾಸ್ ಪ್ರಭು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಕೆಲ ದಿನಗಳ ಹಿಂದಷ್ಟೇ ಇಫ್ತಾರ್ ಕೂಟ ಆಯೋಜಿಸಿ ಮುಸ್ಲಿಮರಿಗೆ ಊಟ ಬಡಿಸಿದ್ದರು’ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ.
ಇದು ಸುಳ್ಳುಸುದ್ದಿ ಎಂದು ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ಬಾಂಗ್ಲಾದೇಶದ ಹಿಂಸಾಚಾರದ ವೇಳೆ ಹತ್ಯೆಗೀಡಾದ ಮತ್ತು ಹಲ್ಲೆಗೀಡಾದ ಸಾಧುಗಳ ಪಟ್ಟಿಯನ್ನು ಬಾಂಗ್ಲಾದೇಶದ ಇಸ್ಕಾನ್ ದೇವಾಲಯ ಬಹಿರಂಗಪಡಿಸಿದೆ. ಅದರಲ್ಲಿ ನಿತ್ಯ ದಾಸ್ ಅವರ ಹೆಸರಿಲ್ಲ. ನಿತ್ಯ ದಾಸ್ ಅವರ ಚಿತ್ರ ಎಂದು ಹೇಳಲಾಗಿರುವ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಪಶ್ಚಿಮ ಬಂಗಾಳದ ಮಾಯಪುರದ ಇಸ್ಕಾನ್ ದೇವಸ್ಥಾನದಲ್ಲಿ 2016ರಲ್ಲಿ ಹರೇ ಕೃಷ್ಣ ಎಂಬ ಹಿಂದೂ ಸಂಘಟನೆ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಈ ಚಿತ್ರ ತೆಗೆಯಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.