‘ಅಖಿಲೇಶ್ ಯಾದವ್ ಅವರ ಮೇಲೆ ಎಷ್ಟು ಶೂಗಳನ್ನು ಎಸೆಯಲಾಯಿತು ಎಂದು ಎಣಿಸಿ’, ‘ಶೂಗಳು, ಚಪ್ಪಲಿಗಳನ್ನು ಅಖಿಲೇಶ್ ಅವರ ಮೇಲೆ ಎಸೆಯಲಾಗುತ್ತಿದೆ. ಅಖಿಲೇಶ್ ಅವರು ಸೋಲುತ್ತಿದ್ದಾರೆ’ ಎಂಬಂಥ ಪೋಸ್ಟ್ಗಳು ‘ಎಕ್ಸ್’ ಮಾಧ್ಯಮಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿವೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ಚುನಾವಣಾ ಬಸ್ನ ಮೇಲೆ ನಿಂತು ಜನರತ್ತ ಕೈಬೀಸುತ್ತಿರುವುದು ಮತ್ತು ಇದೇ ವೇಳೆ ಜನರ ಕಡೆಯಿಂದ ಕೆಲವು ವಸ್ತುಗಳು ಬಸ್ನತ್ತ ಬೀಳುತ್ತಿರುವ ದೃಶ್ಯಗಳ ವಿಡಿಯೊವನ್ನು ಪೋಸ್ಟ್ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ಅಖಿಲೇಶ್ ಅವರು ಕನೌಜ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಏಪ್ರಿಲ್ 27ರಂದು ಕ್ಷೇತ್ರದ ರಸೂಲಾಬಾದ್ ಎಂಬಲ್ಲಿ ಮತಯಾಚಿಸಿದ್ದಾರೆ. ಈ ವೇಳೆ ತಮ್ಮ ಚುನಾವಣಾ ಬಸ್ನ ಮೇಲಿದ್ದ ಅಖಿಲೇಶ್ ಅವರ ಮೇಲೆ ಜನರು ಹೂವಿನ ಹಾರಗಳನ್ನು, ಹೂವುಗಳನ್ನು ಎಸೆದಿದ್ದರು. ಇದನ್ನೇ ತಿರುಚಿ, ಅಖಿಲೇಶ್ ಅವರ ಮೇಲೆ ಶೂ ಎಸೆಯಲಾಗುತ್ತಿದೆ ಎಂದು ತಪ್ಪು ಮಾಹಿತಿ ಹಂಚಲಾಗುತ್ತಿದೆ. ಈ ವಿಡಿಯೊವು ಮೇ 2ರಂದು ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಮೊದಲ ಬಾರಿಗೆ ಕಾಣಿಸಿತು. ಹೀಗೆ ಹಂಚಿಕೊಳ್ಳುವಾಗ ‘ಶೂಗಳನ್ನು ಎಸೆಯಲಾಗುತ್ತಿದೆ’ ಎಂದು ಹೇಳಲಾಗಿಲ್ಲ. ಜೊತೆಗೆ, ಈ ರ್ಯಾಲಿಯ ಕುರಿತು ಹಲವು ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿವೆ. ಇಂಥ ಘಟನೆ ನಡೆದ ಬಗ್ಗೆ ಯಾವ ವರದಿಯಲ್ಲೂ ಉಲ್ಲೇಖವಿಲ್ಲ. ಈ ರ್ಯಾಲಿಯ ಪೂರ್ಣ ವಿಡಿಯೊವನ್ನು ಸಮಾಜವಾದಿ ಪಕ್ಷ ತನ್ನ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ರ್ಯಾಲಿಯಲ್ಲಿ ಅಖಿಲೇಶ್ ಅವರ ಜೊತೆಯಿದ್ದ ಸ್ಥಳೀಯ ಶಾಸಕಿ ರೇಖಾ ವರ್ಮಾ ಅವರನ್ನೂ ಸ್ಥಳೀಯ ಪತ್ರಕರ್ತರನ್ನೂ ವಿಚಾರಿಸಲಾಯಿತು. ಅಖಿಲೇಶ್ ಅವರ ರ್ಯಾಲಿಯಲ್ಲಿ ಅವರ ಮೇಲೆ ಶೂಗಳನ್ನು ಎಸೆಯಲಾಗಿಲ್ಲ ಎಂದು ಬೂಮ್ಲೈವ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.