‘ರಾಹುಲ್ ಗಾಂಧಿ ಅವರ ಸಂಸತ್ ಕ್ಷೇತ್ರ ವಯನಾಡ್ ದೇಶದ ಮೊದಲ ಸ್ಮಾರ್ಟ್ ಸಿಟಿ ಆಗಿದೆ. ಇಲ್ಲಿನ ಎಲ್ಲಾ ಮನೆಗಳ ಮುಂದೆ ಈಜುಕೊಳ ನಿರ್ಮಿಸಲಾಗಿದೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜತೆಯಲ್ಲಿ ಹಳ್ಳಿಯೊಂದರ ರಸ್ತೆಯಲ್ಲಿ ಹೊಂಡಗಳೇ ತುಂಬಿರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಚಿತ್ರ ಮತ್ತು ವಿವರವನ್ನು ಬಿಜೆಪಿಯ ಪ್ರಿಯ ಶರ್ಮಾ ಮೊದಲು ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಕ್ಷೇತ್ರದ ಅಭಿವೃದ್ಧಿಯ ವೈಖರಿ ಇದು ಎಂದು ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಆದರೆ ಇದು ಸುಳ್ಳು ಸುದ್ದಿ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ವರದಿ ಪ್ರಕಟಿಸಿದೆ. ಇದು ಬಿಹಾರದ ರಾಜ್ಯ ಹೆದ್ದಾರಿ ಒಂದರ ಚಿತ್ರ ಎಂದು 2017ರ ಜುಲೈ 3ರಂದು ಎಬಿಪಿ ನ್ಯೂಸ್ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ತೋರಿಸಲಾಗಿದ್ದ ಚಿತ್ರ ಮತ್ತು ವಿಡಿಯೊವನ್ನು ಬಳಸಿಕೊಂಡು, ಇದು ವಯನಾಡಿನ ರಸ್ತೆಗಳ ಸ್ಥಿತಿ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ಗಳಲ್ಲಿನ ವರದಿಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಆಲ್ಟ್ನ್ಯೂಸ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.