ಉತ್ತರ ಪ್ರದೇಶ ವಿಧಾನಸಭೆಗೆ ಮೂರನೇ ಹಂತದ ಮತದಾನ ನಡೆಯುತ್ತಿರುವಂತೆಯೇ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಸ್ಪಿಗೆ ಮತ ನೀಡಿ ಎಂದು ಅಪರಾಧಿಗಳಿಗೆ ಅಖಿಲೇಶ್ ಅವರು ಮನವಿ ಮಾಡುತ್ತಿರುವುದು ವಿಡಿಯೊದಲ್ಲಿ ಇದೆ. ‘ಯಾರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಯಸುತ್ತೀರಿ, ಆದರೆ ಕಾನೂನು ಪಾಲಿಸುವುದಿಲ್ಲ ಅಂಥವರು ಎಸ್ಪಿಗೆ ಮತ ನೀಡಿ. ಬಡವರಿಗೆ ಅನ್ಯಾಯ ಮಾಡಲು ಬಯಸುವವರು ಎಸ್ಪಿಗೆ ಮತ ನೀಡಿ’ ಎಂದು ಅಖಿಲೇಶ್ ಹೇಳಿರುವುದು ವಿಡಿಯೊದಲ್ಲಿ ಸೆರೆ ಆಗಿದೆ.
ವೈರಲ್ ಆಗಿರುವ ವಿಡಿಯೊ ತಿರುಚಲಾಗಿರುವ ವಿಡಿಯೊ ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. ಈ ವಿಡಿಯೊ 2022ರ ಫೆ. 16ರಂದು ನ್ಯೂಸ್ 18 ಹಿಂದಿ ಸೇರಿ ಹಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಔರೈಯಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದ ಅಖಿಲೇಶ್ ಅವರು, ‘ಯಾರು ಕಾನೂನನ್ನು ಕೈಗೆತ್ತಿಕೊಳ್ಳಲು ಬಯಸುತ್ತೀರಿ, ಆದರೆ ಕಾನೂನು ಪಾಲಿಸುವುದಿಲ್ಲ ಅಂಥವರು ಎಸ್ಪಿಗೆ ಮತ ನೀಡಬೇಡಿ. ಯಾರು ಬಡವರಿಗೆ ಅನ್ಯಾಯ ಮಾಡಲು ಬಯಸುತ್ತೀರಿ ಅಂಥವರು ಎಸ್ಪಿಗೆ ಮತ ನೀಡಬೇಡಿ’ ಎಂದಿದ್ದರು. ಇದೇ ರೀತಿಯ ಹೇಳಿಕೆಯನ್ನು ಅವರು ಫೆ.12 ರಂದು ಬರೇಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡಾ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.