ADVERTISEMENT

ಅಗ್ಗದ ಟಿಕೆಟಿನಲ್ಲಿ ಪಯಣ, ಐಷಾರಾಮೀ ದರ ವಸೂಲಿ: ಬೇಡಿ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 10:10 IST
Last Updated 20 ಅಕ್ಟೋಬರ್ 2011, 10:10 IST

ನವದೆಹಲಿ (ಪಿಟಿಐ): ಆಂತರಿಕ ಅಸಮಾಧಾನಗಳಿಂದ ನಲುಗುತ್ತಿರುವ ಅಣ್ಣಾ ಹಜಾರೆ ತಂಡ ಗುರುವಾರ ಇನ್ನೊಂದು ವಿವಾದದಲ್ಲಿ ಸಿಲುಕಿತು. ತಂಡದ ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬರಾದ ಕಿರಣ್ ಬೇಡಿ ಅವರು ಸಮಾರಂಭಗಳಿಗೆ ಹಾಜರಾಗುತ್ತಿದ್ದಾಗ ಅತಿಥೇಯರಿಂದ ವಿಮಾನಯಾನ ಪೂರ್ಣ ಟಿಕೆಟ್ ಹಣ ಪಡೆದು, ರಿಯಾಯ್ತಿ ದರದಲ್ಲಿ ಪಯಣಿಸುತ್ತಿದ್ದರು ಎಂಬ ಆರೋಪ ಇದೀಗ ಬಂದಿದೆ.ಆದರೆ ಇದರಲ್ಲಿ ತಾನು ಯಾವುದೇ ವೈಯಕ್ತಿಕ ಲಾಭ ಮಾಡಿಕೊಂಡಿಲ್ಲ ಎಂದು ಕಿರಣ್ ಪ್ರತಿಪಾದಿಸಿದ್ದಾರೆ.

ಬೇಡಿ ಅವರು ತಮ್ಮ ಶೌರ್ಯ ಪ್ರಶಸ್ತಿ ಪದಕವನ್ನು ಬಳಸಿಕೊಂಡು ವಿಮಾನಯಾನದಲ್ಲಿ ಶೇಕಡಾ 75ರಷ್ಟು ರಿಯಾಯ್ತಿಯನ್ನು ಏರ್ ಇಂಡಿಯಾ ಟಿಕೆಟ್ ಗಳಲ್ಲಿ ಪಡೆಯುತ್ತಿದ್ದರು. ಆದರೆ ತಮ್ಮನ್ನು ಸಮಾರಂಭಗಳಿಗೆ ಕರೆಯುವ ಸಂಘಟಕರಿಂದ ವಿಮಾನಯಾನದ ಪೂರ್ಣ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬೇಡಿ ಅವರು ~ಐಷಾರಾಮೀ ಪಯಣವು ನನನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದ ಸಂಘಟಕರು/ ಕಾರ್ಪೊರೇಟ್ ಸಂಸ್ಥೆಗಳ ಸರ್ಕಾರೇತರ ಸಂಘಟನೆಗಳ ಆಹ್ವಾನದ ಅಂಗವಾಗಿ ಇರುತ್ತಿತ್ತು. ಸರ್ಕಾರೇತರ ಸಂಘಟನೆಗಳು ಹಣ ಉಳಿತಾಯಕ್ಕಾಗಿ ಐಷಾರಾಮೀ ದರ ಪಡೆದರೂ ಕಡಿಮೆ ದರದಲ್ಲಿ ಪಯಣಿಸುವ ಆಯ್ಕೆಯ ಸ್ವಾತಂತ್ರ ಬಳಸುವುದು ಸಾಮಾನ್ಯ  ಎಂದು ಪಿಟಿಐ ಜೊತೆಗೆ ಮಾತನಾಡುತ್ತಾ ಹೇಳಿದರು.

~ ಇಲ್ಲಿ ನಾನು ಯಾವುದೇ ವೈಯಕ್ತಿಕ ಲಾಭ ಮಾಡಿಕೊಂಡಿಲ್ಲ. ನನ್ನ ವಿರುದ್ಧ ಟೀಕಾಪ್ರಹಾರದ ಬಂದೂಕು ಹಿಡಿದವರಿಗೆ ನಿರಾಶೆ ಉಂಟು ಮಾಡುತ್ತಿದ್ದೇನೆ ಕ್ಷಮಿಸಿ. ಈ ಮಾದರಿಯ ಪ್ರಚಾರವನ್ನು ನಾನು ಸಾರ್ವಜನಿಕ ಜೀವನವು ಮುಂದೊಡ್ಡುವ ಸವಾಲುಗಳ ಅಂಗವೆಂದೇ ಪರಿಗಣಿಸುತ್ತೇನೆ~ ಎಂದು ಅವರು ನುಡಿದರು.

~ನಾನು ಉಳಿತಾಯ ಮಾಡಿದ ಹಣ ನನ್ನ ಉಸ್ತುವಾರಿಯಲ್ಲಿ ನಡೆಯುತ್ತಿರುವ ~ವಿಷನ್ ಇಂಡಿಯಾ~ ಸರ್ಕಾರೇತರ ಸಂಘಟನೆಗೆ ಹೋಗಿದೆ~ ಎಂದೂ ಕಿರಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.