ಬಾಲಸೋರ್ (ಒಡಿಶಾ): ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, 4 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಖಂಡಾಂತರ ಕ್ಷಿಪಣಿ ‘ಅಗ್ನಿ–4’ರ ಕೊನೆಯ ಪರೀಕ್ಷೆ ಯಶಸ್ವಿಯಾಗಿದೆ.
‘ಅಗ್ನಿ–5’ ಕ್ಷಿಪಣಿಯ ಯಶಸ್ವಿ ಪರೀಕ್ಷೆಯ ಬೆನ್ನಲ್ಲೇ ನಡೆದ ಈ ಉಡಾವಣೆ ಭಾರತದ ರಕ್ಷಣಾ ವ್ಯವಸ್ಥೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಮುಖ ಮಾಹಿತಿ
* ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಬೆಳಿಗ್ಗೆ 11.55ಕ್ಕೆ ಉಡಾವಣೆ.
* ಉಡಾವಣೆಗೆ ಸಂಚಾರಿ ಉಡಾವಣಾ ವಾಹನದ (ಮೊಬೈಲ್ ಲಾಂಚರ್) ಬಳಕೆ.
* ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ.
* ರಿಂಗ್ ಲೇಸರ್ ಜೈರೊ ಬೇಸ್ಡ್ ಇನರ್ಷಿಯಲ್ ನೇವಿಗೇಷನ್ ಸಿಸ್ಟಮ್ (ಆರ್ಐಎನ್ಎಸ್) ಮತ್ತು ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್ಎಸ್) ಅಳವಡಿಸಲಾಗಿದ್ದು, ನಿಖರವಾಗಿ ಗುರಿ ತಲುಪಬಲ್ಲದು.
* ‘ಅಗ್ನಿ–4’ ಕ್ಷಿಪಣಿಯ ಅಭಿವೃದ್ಧಿ ಹಂತದಲ್ಲಿ ನಡೆದ ಆರನೇ ಪರೀಕ್ಷೆ ಇದು.
* ಈ ಕ್ಷಿಪಣಿಯ 5ನೇ ಪರೀಕ್ಷೆ 2015ರ ನವೆಂಬರ್ 9 ರಂದು ನಡೆದಿತ್ತು.
* ರಕ್ಷಣಾ ಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಹಾದಿ ಸುಗಮ.
* ಅಗ್ನಿ–1, ಅಗ್ನಿ–2 ಮತ್ತು ಅಗ್ನಿ–3 ಕ್ಷಿಪಣಿಗಳನ್ನು ಈಗಾಗಲೇ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.
* 5 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ‘ಅಗ್ನಿ–5’ ಕ್ಷಿಪಣಿಯ ಅಭಿವೃದ್ಧಿ ಹಂತದ ಪರೀಕ್ಷೆ
ಡಿ. 26 ರಂದು ನಡೆದಿತ್ತು. ಚೀನಾ ಸೇರಿದಂತೆ ಏಷ್ಯಾದ ಬಹುತೇಕ ಭಾಗವನ್ನು ಇದು ತಲುಪಬಲ್ಲದು.
ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಎಲ್ಲ ಉದ್ದೇಶಗಳು ಈಡೇರಿವೆ.
-ಡಿಆರ್ಡಿಒ ಮೂಲಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.