ADVERTISEMENT

ಅತ್ಯಾಚಾರ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 20:26 IST
Last Updated 20 ಏಪ್ರಿಲ್ 2013, 20:26 IST

ಮುಜಾಫರ್‌ಪುರ (ಬಿಹಾರ) (ಪಿಟಿಐ/ಐಎಎನ್‌ಎಸ್):  ನವದೆಹಲಿಯಲ್ಲಿ ಐದು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮನೋಜ್ ಕುಮಾರನನ್ನು (25) ಬಿಹಾರದ ಚಿಕ್‌ನೌಟದಲ್ಲಿ ಶನಿವಾರ ಮುಂಜಾನೆ ಬಂಧಿಸಲಾಗಿದೆ. ಆರೋಪಿಯು ಪತ್ನಿಯ ತವರು ಮನೆಯಲ್ಲಿ ಅಡಗಿದ್ದ. ದೆಹಲಿಯಿಂದ ಇಲ್ಲಿಗೆ ರೈಲಿನಲ್ಲಿ ಬಂದಿದ್ದನ್ನು ಆತನ ಮೊಬೈಲ್ ಫೋನ್ ಜಾಡು ಹಿಡಿದು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್‌ರು ತಿಳಿಸಿವೆ.

ಸಾಮಾಜಿಕ ಬಹಿಷ್ಕಾರ: ಮನೋಜ್ ಕುಮಾರ್  ಕುಟುಂಬಕ್ಕೆ ಗ್ರಾಮ ಪಂಚಾಯಿತಿ ಸಾಮಾಜಿಕ ಬಹಿಷ್ಕಾರ ಹಾಕಿದೆ.
ಸೋನಿಯಾ ಗುಡುಗು:  ಮಗುವಿನ ಮೇಲೆ ನಡೆದಿರುವ ಹೀನ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, `ಭರವಸೆಗಳ ಮಾತು ಸಾಕು, ಕ್ರಮ ಜರುಗಿಸಿ' ಎಂದು ಕಟು ಶಬ್ದಗಳಲ್ಲಿ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ರಾಷ್ಟ್ರಪತಿ ಆತಂಕ: ವ್ಯವಸ್ಥೆಯು ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸಲು ವಿಫಲವಾಗಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕರೆ ನೀಡಿದ್ದಾರೆ.

ಒತ್ತಾಯ: ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಮತ್ತು ಅದರಲ್ಲಿ ಭಾಗಿಯಾಗುವವರಿಗೆಗಲ್ಲು ಶಿಕ್ಷೆ ಕಾನೂನು ಜಾರಿಗೊಳಿಸಬೇಕು ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದಾರೆ.


ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
ನವದೆಹಲಿ: ಡಿಸೆಂಬರ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಆತಂಕ, ಆಕ್ರೋಶಗೊಂಡಿರುವ ರಾಜಧಾನಿಯ ಜನರು, ಈಗ ಐದು ವರ್ಷದ ಮಗುವಿನ ಮೇಲೆ ಇಂತಹದ್ದೇ ಕ್ರೌರ್ಯ ನಡೆದಿರುವುದರಿಂದ ಮತ್ತಷ್ಟು ಕ್ರೋಧಗೊಂಡಿದ್ದಾರೆ. ನೂರಾರು ಜನ ರಸ್ತೆಗಿಳಿದು ಶನಿವಾರ ಪ್ರತಿಭಟನೆ ನಡೆಸಿದರು.

ದೆಹಲಿಯ ಕೇಂದ್ರ ಭಾಗದಲ್ಲಿರುವ ಪೊಲೀಸ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು. ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಗುವಿನ ಕುಟುಂಬದವರಿಗೆ ನ್ಯಾಯ ಒದಗಿಸಬೇಕು. ನವದೆಹಲಿ ಪೊಲೀಸ್ ಆಯುಕ್ತರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. 

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮನೆಗಳ ಮುಂದೆ, ಬಾಲಕಿ ಚಿಕಿತ್ಸೆಗೆ ದಾಖಲಾಗಿರುವ `ಎಐಐಎಂಸ್' ಮತ್ತು ಬಾಲಕಿಯ ಪೋಷಕರು ವಾಸವಿರುವ ಗಾಂಧಿನಗರದಲ್ಲೂ ಪ್ರತಿಭಟನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT