ADVERTISEMENT

ಅದಿರು ಸಾಗಣೆ: ಅರ್ಜಿ ವಿಲೇವಾರಿಗೆ ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ನವದೆಹಲಿ: ನಿಗದಿತ ಕಾಲಮಿತಿಯೊಳಗೆ ಅದಿರು ಸಾಗಣೆ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.

ಅದಿರು ರಫ್ತಿಗೆ ಅನುಮತಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂಬ ರಾಜ್ಯ ಸರ್ಕಾರದ ಹೇಳಿಕೆ ಹಿನ್ನೆಲೆಯಲ್ಲಿ ನ್ಯಾ.ಆರ್.ವಿ. ರವೀಂದ್ರನ್ ಹಾಗೂ ನ್ಯಾ. ಎ. ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠ ಯಾವುದೇ ಆದೇಶ ನೀಡಲು ನಿರಾಕರಿಸಿತು.

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಹೊಸ ಗಣಿ ನೀತಿ ಅನ್ವಯ ಗಣಿ ಉದ್ಯಮಿಗಳ ಅದಿರು ರಫ್ತು ಅನುಮತಿ  ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ವಕೀಲರಾದ ಅನಿತಾ ಶೆಣೈ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಅರ್ಜಿದಾರರಾದ ಎಂಎಸ್‌ಪಿಎಲ್, ಸೆಸ ಗೋವಾ, ಎಸ್. ಬಿ. ಮಿನರೆಲ್ಸ್ ಮತ್ತಿತರ ಕಂಪೆನಿಗಳು ರಾಜ್ಯ ಸರ್ಕಾರ ರಫ್ತು ಅನುಮತಿ ನೀಡಲು ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು. ಏಪ್ರಿಲ್ 5ರಂದು ನ್ಯಾಯಾಲಯ ಎರಡು ವಾರದೊಳಗೆ ರಫ್ತು ನಿಷೇಧ ಹಿಂದಕ್ಕೆ ಪಡೆಯುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.