ಚೆನ್ನೈ (ಪಿಟಿಐ): ಎಲ್ಪಿಜಿ ಸಾಗಿಸುವ ಟ್ಯಾಂಕರ್ಗಳ ಮುಷ್ಕರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಶನಿವಾರ ತ್ರಿಪಕ್ಷೀಯ ಸಭೆ ಕರೆಯಲಾಗಿದೆ. ತಮಿಳುನಾಡು ಸರ್ಕಾರ, ತೈಲ ಮಾರಾಟ ಕಂಪೆನಿಗಳು ಹಾಗೂ ದಕ್ಷಿಣ ಪ್ರಾಂತೀಯ ಸಗಟು ಎಲ್ಪಿಜಿ ಸಾಗಣೆ ಟ್ಯಾಂಕರ್ ಮಾಲೀಕರ ಸಂಘ ಈ ಸಭೆಯಲ್ಲಿ ಭಾಗವಹಿಸಲಿವೆ.
ಎಲ್ಪಿಜಿ ಟ್ಯಾಂಕರ್ ಮುಷ್ಕರದಿಂದ ಆದ ಪರಿಣಾಮಗಳ ಕುರಿತು ಅವಲೋಕಿಸಲು ಭಾರತೀಯ ತೈಲ ನಿಗಮ ಹಾಗೂ ಭಾರತ್ ಪೆಟ್ರೋಲಿಯಂ ಅಧಿಕಾರಿಗಳು ಶುಕ್ರವಾರ ತಮಿಳುನಾಡು ಮುಖ್ಯ ಕಾರ್ಯದರ್ಶಿ ದೇಬೇಂದ್ರನಾಥ್ ಸಾರಂಗಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಎಲ್ಪಿಜಿ ಸಾಗಣೆ ಟೆಂಡರ್ ಪರಿಷ್ಕರಿಸುವಂತೆ ಆಗ್ರಹಿಸಿ ಜನವರಿಯಲ್ಲಿ ಒಂದು ವಾರ ಕಾಲ ಟ್ಯಾಂಕರ್ ಮಾಲೀಕರು ಮುಷ್ಕರ ಹೂಡಿದ್ದರು. ಆಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ತೊಂದರೆಯಾಗಿತ್ತು. ತಮಿಳುನಾಡು ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ನಡೆದ ತ್ರಿಪಕ್ಷೀಯ ಸಭೆಯ ನಂತರ ಈ ಮುಷ್ಕರ ಅಂತ್ಯಗೊಳಿಸಲಾಗಿತ್ತು.
ಟೆಂಡರ್ ಪರಿಷ್ಕರಿಸುವ ತಮ್ಮ ಬೇಡಿಕೆಯನ್ನು ತೈಲ ಕಂಪೆನಿಗಳು ನಿರ್ಲಕ್ಷ್ಯಿಸಿವೆ ಎಂದು ಈಗ ಮತ್ತೆ ಟ್ಯಾಂಕರ್ ಮಾಲೀಕರ ಸಂಘ ಮುಷ್ಕರ ಆರಂಭಿಸಿದೆ. ದಕ್ಷಿಣದ ನಾಲ್ಕು ರಾಜ್ಯಗಳು ಹಾಗೂ ಗೋವಾ ಮತ್ತು ಪಾಂಡಿಚೇರಿಯ 3,700 ಟ್ಯಾಂಕರ್ ಮಾಲೀಕರು ಈ ಸಂಘದ ಸದಸ್ಯರು. ಮಂಗಳೂರು ಹಾಗೂ ವಿಶಾಖಪಟ್ಟಣಂ ಎಲ್ಪಿಜಿ ಸಂಸ್ಕರಣಾ ಘಟಕಗಳಿಂದ ದಕ್ಷಿಣ ಭಾರತದಾದ್ಯಂತ ಎಲ್ಪಿಜಿಯನ್ನುಈ ಟ್ಯಾಂಕರ್ಗಳ ಮೂಲಕ ಸಾಗಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.