ಕೊಟ್ಟಾಯಂ(ಪಿಟಿಐ): ಸೋಮಾಲಿಯಾ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದೆಯೆಂದು ಶಂಕಿಸಲಾದ ಇಟಲಿ ಮೂಲಕ ತೈಲ ಟ್ಯಾಂಕರ್ ಎಲ್ಲಿ ಲಂಘರು ಹಾಕಿದೆಯೆಂದು ಪತ್ತೆ ಹಚ್ಚುವಂತೆ ರಕ್ಷಣಾ ಸಚಿವ ಎ.ಕೆ. ಆಂಟನಿ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. ಹಡಗಿನಲ್ಲಿದ್ದ ಕೇರಳ ಮೂಲದ ನಾವಿಕರೊಬ್ಬರ ಸಂಬಂಧಿಗಳು ರಕ್ಷಣಾ ಸಚಿವ ಎ.ಕೆ. ಆಂಟನಿಯವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ.
17 ಮಂದಿ ಭಾರತೀಯ ನಾವಿಕರೂ ಸೇರಿದಂತೆ 22 ಮಂದಿ ಸಿಬ್ಬಂದಿಗಳಿದ್ದ ~ಸವಿನ ಕೇಲಿನ್~ ಹಡಗನ್ನು ಸೋಮಾಲಿ ಕಡಲ್ಗಳ್ಳರು ಅಪಹರಿಸಿದ್ದಾರೆಂದು ಶಂಕಿಸಲಾಗಿದೆ. ಆಫ್ರಿಕಾದ ಕರಾವಳಿಯಲ್ಲಿ ಅಪಹರಣಕ್ಕೀಡಾದ ಈ ಹಡಗಿನಲ್ಲಿ ಕೇರಳದ ಚುಂಕಂ ನಿವಾಸಿ ಹರಿ ಸಿ. ನಾಯರ್ ಮತ್ತು ಕೋಝಿಕ್ಕೋಡ್ ಮೂಲದ ಮತ್ತೊಬ್ಬರು ಈ ಹಡಗಿನಲ್ಲಿದ್ದರು.
ನೌಕಾ ತಂತ್ರಜ್ಞರಾಗಿರುವ ಹರಿ ಸಿ. ನಾಯರ್ ಕಳೆದ ಐದು ವರ್ಷಗಳಿಂದ ಬ್ರಿಟಿಷ್ ಕಂಪೆನಿ ವಿ ಶಿಪ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪಹರಣಕ್ಕೀಡಾದ ತೈಲ ಟ್ಯಾಂಕರ್ ಕೂಡಾ ಇದೇ ಕಂಪೆನಿಗೆ ಸೇರಿದೆ. ನಿನ್ನೆ ಮುಂಜಾನೆಯಷ್ಟೇ ಮನೆಯವರನ್ನು ಸಂಪರ್ಕಿಸಿದ್ದ ಹರಿ ಈ ತಿಂಗಳ ಕೊನೆಯ ಹೊತ್ತಿಗೆ ಊರಿಗೆ ಹಿಂದಿರುಗುವಾಗಿ ತಿಳಿಸಿದ್ದರೆಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಸೂಡಾನ್ ನಿಂದ ಮಲೇಶಿಯಾ ಮಾರ್ಗವಾಗಿ ಸಿಂಗಾಪುರದತ್ತ ಸಾಗುತ್ತಿದ್ದ ಟ್ಯಾಂಕರ್ ಫೆ.14ರಂದು ಸಿಂಗಾಪುರ ತಲುಪಲಿತ್ತು. ಕಂಪೆನಿಯ ಮುಂಬೈ ಕಚೇರಿ ಸಂಬಂಧಿಕರಿಗೆ ಅಪಹಣರದ ವಿವರ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.