ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಯುವತಿ ಮೇಲೆ ಶಾಸಕರೊಬ್ಬರು ಅತ್ಯಾಚಾರ ಎಸಗಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಕೋರುವ ಅರ್ಜಿ ದಾಖಲಾದರೆ ಅದನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಕಪಾಡಿಯಾ ಅವರನ್ನು ಒಳಗೊಂಡ ಪೀಠವು ಈ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಅಧಿಕೃತವಾಗಿ ಶುಕ್ರವಾರದೊಳಗೆ ಅರ್ಜಿ ಸಲ್ಲಿಸುವಂತೆ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಹೇಳಿದೆ.
ಹರೀಶ್ ಸಾಳ್ವೆ ಅವರು ಬೇರೊಂದು ಪ್ರಕರಣದ ವಿಚಾರಣೆಯ ವೇಳೆ ಪೊಲೀಸ್ ವ್ಯವಸ್ಥೆ ಸುಧಾರಣೆಯ ಬಗ್ಗೆ ವಾದ ಮಂಡಿಸುತ್ತಾ ಉತ್ತರ ಪ್ರದೇಶದ ಶಾಸಕರೊಬ್ಬರು ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸುವ ಅಗತ್ಯವಿದೆ ಎಂದರು. ಅದಕ್ಕೆ ಪ್ರತಿಯಾಗಿ ಮುಖ್ಯ ನ್ಯಾಯಾಮೂರ್ತಿಗಳು ಅಂತಹ ಅರ್ಜಿ ಬಂದರೆ ಅದನ್ನು ಪರಿಶೀಲಿಸುವುದಾಗಿ ನುಡಿದರು.
ಉತ್ತರ ಪ್ರದೇಶದ ಬಾಂದ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಬಿಎಸ್ಪಿ ಶಾಸಕ ಪುರುಷೋತ್ತಮ್ ನರೇಶ್ ದ್ವಿವೇದಿ ವಿರುದ್ಧ ಇದೆ. ಈ ಬಗ್ಗೆ ಶೋಷಣೆಗೆ ಒಳಗಾದ ಬಾಲಕಿ ದೂರು ನೀಡಿದ್ದಾಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.