ADVERTISEMENT

ಅಮರ ಸಿಂಗ್ ವಿರುದ್ಧದ ಪ್ರಕರಣ: ಪೊಲೀಸರಿಂದ ಪರಿಸಮಾಪ್ತಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 9:40 IST
Last Updated 3 ನವೆಂಬರ್ 2012, 9:40 IST
ಅಮರ ಸಿಂಗ್ ವಿರುದ್ಧದ ಪ್ರಕರಣ: ಪೊಲೀಸರಿಂದ ಪರಿಸಮಾಪ್ತಿ ವರದಿ ಸಲ್ಲಿಕೆ
ಅಮರ ಸಿಂಗ್ ವಿರುದ್ಧದ ಪ್ರಕರಣ: ಪೊಲೀಸರಿಂದ ಪರಿಸಮಾಪ್ತಿ ವರದಿ ಸಲ್ಲಿಕೆ   

ಖಾನ್‌ಪುರ (ಪಿಟಿಐ): ರಾಜ್ಯಸಭಾ ಸದಸ್ಯ ಅಮರ ಸಿಂಗ್ ಅವರು ಕಳೆದ ಮೂರು ವರ್ಷಗಳಿಂದ ಎದುರಿಸುತ್ತಿದ್ದ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ಕೊರತೆಯ ಕಾರಣ ನೀಡಿ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಪರಿಸಮಾಪ್ತಿ ವರದಿಯನ್ನು ಸಲ್ಲಿಸಿದ್ದು, ಇದರಿಂದಾಗಿ ಅಮರ ಸಿಂಗ್ ಅವರು ನಿರಾಳರಾದಂತಾಗಿದ್ದಾರೆ.
 
ಅಮರ ಸಿಂಗ್ ಅವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಜಿಲ್ಲಾ ನ್ಯಾಯಾಲಯಕ್ಕೆ ಪರಿಸಮಾಪ್ತಿ ವರದಿ ಸಲ್ಲಿಸಿದ್ದಾರೆ ಎಂದು ಶನಿವಾರ ಮೂಲಗಳು ತಿಳಿಸಿವೆ.
 
2009ರಲ್ಲಿ ಬಿಎಸ್‌ಪಿ ಆಡಳಿತದಲ್ಲಿ ಅಮರ ಸಿಂಗ್ ಅವರು ಉತ್ತರ ಪ್ರದೇಶ ಅಭಿವೃದ್ಧಿ ಪರಿಷತ್‌ನ ನಿರ್ದೇಶಕರಾಗಿದ್ದ ವೇಳೆ ತಮ್ಮ ಕಚೇರಿ ದುರುಪಯೋಗ ಪಡಿಸಿಕೊಂಡು ಸುಮಾರು 500 ಕೋಟಿ ಹಗರಣ ಮಾಡಿದ್ದಾರೆ ಎಂದು ಸಿಂಗ್ ವಿರುದ್ಧ ಶಿವಕಾಂತ್ ತ್ರಿಪಾಠಿ ಎಂಬುವವರು ದೂರು ದಾಖಲಿಸಿದ್ದರು.
 
ದೂರಿನಲ್ಲಿ ಅಮರ ಸಿಂಗ್ ಅವರು ದೊಡ್ಡ ಮೊತ್ತ ಹಣವನ್ನು 55 ಕಂಪೆನಿಗಳಿಗೆ ವರ್ಗಾವಣೆ ಮಾಡಿ, ನಂತರ ಅವುಗಳನ್ನು ವಿಲೀನ ಮಾಡಿದ್ದಾರೆ ಎಂದು ಆರೊಪಿಸಿದ್ದರಿಂದ ಬಾಬುಪುರ್ವಾ ಪೊಲೀಸರು ಅಕ್ಟೋಬರ್ 15ರಂದು ಸಿಂಗ್ ಅವರ ವಿರುದ್ಧ ಹಣ ವರ್ಗಾವಣೆ ನಿಗ್ರಹ ಕಾಯ್ದೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ದೂರು ದಾಖಲಿಸಿದ್ದರು.

ಪೊಲೀಸರ ಈ ಕ್ರಮವು ಇತ್ತೀಚಿನ ವರ್ಷಗಳಲ್ಲಿ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರ ಸಿಂಗ್ ಅವರು ಮತ್ತೆ ಒಂದಾಗುತ್ತಿರುವ ಲಕ್ಷಣ ತೋರುತ್ತಿವೆ.
 
ಅಮರ ಸಿಂಗ್ ವಿರುದ್ಧದ ಪ್ರಕರಣವನ್ನು ಮಾಯಾವತಿ ಸರ್ಕಾರವು ಜಾರಿ ನಿರ್ದೇಶನಾಲಯದ ಆರ್ಥಿಕ ಅಪರಾಧ ವಿಭಾಗದ ತನಿಖೆಗೆ ವಹಿಸಿತ್ತು. ಆದರೆ ಈಗಿನ ಸರ್ಕಾರವು ಪ್ರಕರಣವನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸುವ ಮೂಲಕ ಮೃದುಧೋರಣೆ ತಾಳಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.