ನವದೆಹಲಿ (ಪಿಟಿಐ): `ಭಯೋತ್ಪಾದಕರು ಎಂಬ ಆರೋಪವನ್ನು ಸಾಬೀತುಪಡಿಸುವಲ್ಲಿ ಅಧಿಕಾರಿಗಳು ವಿಫಲಗೊಂಡ ಬಳಿಕವೂ ಜೈಲಿನಲ್ಲಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಲು ಕೂಡಲೇ ಕಾರ್ಯತಂತ್ರ ರೂಪಿಸಲಾಗುವುದು' ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ರಾಜಕೀಯ ಪಕ್ಷಗಳಿಗೆ ಭರವಸೆ ನೀಡಿದ್ದಾರೆ.
ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ನೇತೃತ್ವದ ನಿಯೋಗವು ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಅವರು, `ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಅವರೊಂದಿಗೆ ಚರ್ಚಿಸಿ ಹೊಸ ಕಾರ್ಯತಂತ್ರ ರೂಪಿಸಲಾಗುತ್ತದೆ' ಎಂದರು ಭರವಸೆ ನೀಡಿದರು.
`ಹೊಸ ಕಾರ್ಯತಂತ್ರಕ್ಕೆ ಕಾಲ ಮಿತಿ ನಿಗದಿ ಮಾಡುವ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ' ಎಂದು ಯೆಚೂರಿ ಸುದ್ದಿಗಾರರಿಗೆ ತಿಳಿಸಿದರು.
ರಾಮ್ ವಿಲಾಸ್ ಪಾಸ್ವಾನ್ (ಎಲ್ಜೆಪಿ), ಮಣಿ ಶಂಕರ್ ಅಯ್ಯರ್ (ಕಾಂಗ್ರೆಸ್), ಡಿ. ರಾಜಾ (ಸಿಪಿಐ), ರಾಮ್ಗೋಪಾಲ್ ಯಾದವ್ (ಎಸ್ಪಿ), ಪ್ರೇಮ್ಚಂದ್ ಗುಪ್ತಾ (ಆರ್ಜೆಡಿ), ಶಿವಾನಂದ ತಿವಾರಿ (ಜೆಡಿಯು) ಮತ್ತು ಡಿಎಂಕೆ, ನ್ಯಾಷನಲ್ ಕಾನ್ಫರೆನ್ಸ್, ಟಿಡಿಪಿ ಹಾಗೂ ಬಿಎಸ್ಪಿ ಸಂಸದರು ಕೂಡ ನಿಯೋಗದಲ್ಲಿದ್ದರು.
`ಹಲವು ವರ್ಷಗಳ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಜರ್ಜರಿತರಾದ ಅಮಾಯಕರಲ್ಲಿ ಕೆಲವರು ಕಾನೂನು ಹೋರಾಟದಿಂದ ಬಿಡುಗಡೆಯಾಗಿದ್ದಾರೆ. ಇಂಥವರು ಕುಟುಂಬದಿಂದ ಬೇರ್ಪಟ್ಟು ಸೆರೆಮನೆಯಲ್ಲಿ ಕಳೆಯುತ್ತಿರುವುದರಿಂದ ಅವರ ಕುಟುಂಬದ ಸದಸ್ಯರು ಅನುಭವಿಸುತ್ತಿರುವ ವೇದನೆಯನ್ನು ಮಾತುಗಳಲ್ಲಿ ಹೇಳಲು ಅಸಾಧ್ಯ' ಎಂದು ಮನವಿಯಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.