ನವದೆಹಲಿ (ಪಿಟಿಐ): ಅಮೆರಿಕದ ಕೆಲವು ಶ್ರೇಣಿಯ ರಾಜತಾಂತ್ರಿಕ ಅಧಿಕಾರಿಗಳ ರಕ್ಷಣೆಯನ್ನು ಭಾರತ ಸರ್ಕಾರ ಕಡಿತಗೊಳಿಸಿದೆ. ಹಾಗೆಯೇ ಅವರ ಕುಟುಂಬ ಸದಸ್ಯರ ಎಲ್ಲ ರೀತಿಯ ರಾಜತಾಂತ್ರಿಕ ರಕ್ಷಣೆಯನ್ನು ರದ್ದುಪಡಿಸಿದೆ.
ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಪ್ರಕರಣಕ್ಕೆ ಕಠಿಣ ಪ್ರತಿ ಕ್ರಮದ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ, ವೀಸಾ ವಂಚನೆ ಪ್ರಕರಣದಲ್ಲಿ ದೇವಯಾನಿ ಅವರನ್ನು ಬಂಧಿಸಿ, ಅಪಮಾನಕರ ದೇಹ ಶೋಧಕ್ಕೆ ಒಳಪಡಿಸಲಾಗಿತ್ತು. ಭಾರತದಲ್ಲಿರುವ ಅಮೆರಿಕದ ನಾಲ್ಕು ಕಾನ್ಸುಲ್ ಕಚೇರಿಗಳ ಅಧಿಕಾರಿಗಳಿಗೆ ಹೊಸ ಗುರುತು ಚೀಟಿಗಳನ್ನು ನೀಡಲಾಗುವುದು.
‘ಈ ಗುರುತು ಚೀಟಿಗಳ ಪ್ರಕಾರ, ಈ ಅಧಿಕಾರಿಗಳ ರಾಜತಾಂತ್ರಿಕ ರಕ್ಷಣೆ ಕಡಿತಗೊಳ್ಳಲಿದ್ದು, ಗಂಭೀರ ಪ್ರಕರಣಗಳಲ್ಲಿ ಅವರಿಗೆ ರಕ್ಷಣೆ ದೊರೆಯುವುದೇ ಇಲ್ಲ. ’ ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲ್ ಅಧಿಕಾರಿಗಳಿಗೆ ನಿರ್ಬಂಧಿತ ರಕ್ಷಣೆ ಮಾತ್ರ ಇರುವುದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಮೆರಿಕದ ಕಾನ್ಸುಲ್ ಅಧಿಕಾರಿಗಳ ಕುಟುಂಬದ ಸದಸ್ಯರ ರಾಜತಾಂತ್ರಿಕ ಗುರುತು ಪತ್ರಗಳನ್ನು ರದ್ದು ಪಡಿಸಲಾಗಿದೆ. ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲ್ ಅಧಿಕಾರಿಗಳ ಕುಟುಂಬ ಸದಸ್ಯರಿಗೆ ಇಂತಹ ಯಾವುದೇ ಅನುಕೂಲಗಳನ್ನು ಅಮೆರಿಕ ಸರ್ಕಾರ ಒದಗಿಸುತ್ತಿಲ್ಲ.
ವೀಸಾ ವಂಚನೆ ಪ್ರಕರಣದಲ್ಲಿ, ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಮತ್ತು ಅಪಮಾನಕರ ದೇಹ ಶೋಧದ ನಂತರ ಭಾರತ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡುತ್ತಿದೆ. ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಹಲವು ಅನುಕೂಲಗಳನ್ನು ಹಿಂದಕ್ಕೆ ಪಡೆಯಲಾಗಿದೆ.
ರಾಜತಾಂತ್ರಿಕ ರಕ್ಷಣೆ ಮತ್ತು ಇತರ ಅನುಕೂಲಗಳ ಪರಾಮರ್ಶೆಗಾಗಿ ಅಮೆರಿಕದ ಎಲ್ಲ ಕಾನ್ಸುಲ್ ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರ ಗುರುತು ಪತ್ರಗಳನ್ನು ಹಿಂದಿರುಗಿಸಲು ಸೋಮವಾರದವರೆಗೆ ಗಡುವು ನೀಡಲಾಗಿತ್ತು. ಗಡುವು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ದೃಢ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.