ಮುಂಬೈ: ‘ರಿಪಬ್ಲಿಕ್ ಟಿವಿ’ಯ ಸಂಸ್ಥಾಪಕ ಅರ್ನಬ್ ಗೋಸ್ವಾಮಿ ಮತ್ತು ಪತ್ರಕರ್ತೆ ಪ್ರೇಮಾ ಶ್ರೀದೇವಿ ಅವರ ವಿರುದ್ಧ ‘ಟೌಮ್ಸ್ ನೌ’ ಸುದ್ದಿವಾಹಿನಿಯು ಹಕ್ಕುಸ್ವಾಮ್ಯ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
‘ರಿಪಬ್ಲಿಕ್ ಟಿವಿ’ಯು ಮೇ 6ರಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಮತ್ತು ಶಹಾಬುದ್ದೀನ್ ನಡುವಿನ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಿತ್ತು. ಈ ಹಿಂದೆ ‘ಟೈಮ್ಸ್ ನೌ’ನಲ್ಲಿ ವರದಿಗಾರ್ತಿಯಾಗಿದ್ದ ಪ್ರೇಮಾ ಶ್ರೀದೇವಿ ಅವರು ಸುನಂದಾ ಪುಷ್ಕರ್ ಮತ್ತು ಅವರ ಮನೆಗೆಲಸದ ಸಹಾಯಕ ನಾರಾಯಣ್ ಅವರೊಂದಿಗೆ ಮಾತನಾಡಿದ್ದ ದೂರವಾಣಿ ಸಂಭಾಷಣೆಯನ್ನು ‘ರಿಪಬ್ಲಿಕ್ ಟಿವಿ’ಯು ಮೇ 8ರಂದು ಪ್ರಸಾರ ಮಾಡಿತ್ತು.
‘ರಿಪಬ್ಲಿಕ್ ಟಿವಿ’ ಪ್ರಸಾರ ಮಾಡಿದ್ದ ಈ ಎರಡೂ ದೂರವಾಣಿ ಸಂಭಾಷಣೆಗಳ ಹಕ್ಕುಸ್ವಾಮ್ಯವು ತನಗೆ ಸೇರಿದ್ದು ಎಂದಿರುವ ‘ಬೆನೆಟ್, ಕೋಲ್ಮನ್ ಅಂಡ್ ಕೊ ಲಿಮಿಟೆಡ್’ (ಬಿಸಿಸಿಎಲ್) ಅರ್ನಬ್ ಮತ್ತು ಪ್ರೇಮಾ ಶ್ರೀದೇವಿ ಅವರ ವಿರುದ್ಧ ಮುಂಬೈನ ಆಜಾದ್ ಮೈದಾನ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ‘ದಿ ಎಕನಾಮಿಕ್ಸ್ ಟೈಮ್ಸ್’ ವರದಿ ಮಾಡಿದೆ.
ಅರ್ನಬ್ ಈ ಹಿಂದೆ ಬಿಸಿಸಿಎಲ್ ಒಡೆತನದ ‘ಟೈಮ್ಸ್ ನೌ’ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.