ADVERTISEMENT

ಅಸಂಬದ್ಧ, ತರ್ಕಹೀನ ಟೀಕೆಗಳ ನಿರ್ಲಕ್ಷ್ಯ: ಬ್ಲಾಗ್ ನಲ್ಲಿ ಅಣ್ಣಾ ಗುಡುಗು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 11:05 IST
Last Updated 19 ಅಕ್ಟೋಬರ್ 2011, 11:05 IST
ಅಸಂಬದ್ಧ, ತರ್ಕಹೀನ ಟೀಕೆಗಳ ನಿರ್ಲಕ್ಷ್ಯ: ಬ್ಲಾಗ್ ನಲ್ಲಿ ಅಣ್ಣಾ ಗುಡುಗು
ಅಸಂಬದ್ಧ, ತರ್ಕಹೀನ ಟೀಕೆಗಳ ನಿರ್ಲಕ್ಷ್ಯ: ಬ್ಲಾಗ್ ನಲ್ಲಿ ಅಣ್ಣಾ ಗುಡುಗು   

ನವದೆಹಲಿ (ಪಿಟಿಐ): ಚಳವಳಿ ಮುನ್ನಡೆಯುತ್ತಿರುವ ಮಾರ್ಗದ ಬಗ್ಗೆ ಆಕ್ಷೇಪಿಸಿ ಇಬ್ಬರು ಪ್ರಮುಖ ಕಾರ್ಯಕರ್ತರು ತಮ್ಮ ತಂಡದಿಂದ ನಿರ್ಗಮಿಸಿರುವುದರ ಮಧ್ಯೆಯೇ  ತಮ್ಮ ಚಳವಳಿ ಬಗೆಗಿನ ~ಅಸಂಬದ್ಧ~ ಹಾಗೂ ~ತರ್ಕಹೀನ~ ಟೀಕೆಗಳನ್ನು ತಾವು ನಿರ್ಲಕ್ಷಿಸುವುದಾಗಿ ಹೇಳುವ ಮೂಲಕ ಅಣ್ಣಾ ಹಜಾರೆ ಅವರು ತಮ್ಮ ಟೀಕಾಕಾರರಿಗೆ ಪ್ರತಿ ಏಟು ನೀಡಿದ್ದಾರೆ.

~ಮೌನ ವ್ರತ~ದ ಮಧ್ಯೆ ತಮ್ಮ ಬ್ಲಾಗ್ ಬರಹದಲ್ಲಿ ಹಜಾರೆ ಅವರು ~ನನ್ನ ಚಳವಳಿ ರಾಜಕೀಯ ವರ್ತುಲಗಳಲ್ಲಿ ಅಸಂಬದ್ಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ ನಾನು ಅವುಗಳಿಗೆ ಯಾವುದೇ ಬೆಲೆಯನ್ನೂ ಕೊಡುವುದಿಲ್ಲ~ ಎಂದು ಹೇಳಿದ್ದಾರೆ.

~ರಾಜಕೀಯ ಪ್ರತಿಸ್ಫರ್ಧೆಯ ಪರಿಣಾಮವಾಗಿ ಅಸಂಬದ್ಧ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಹಾಗೂ ಚಳವಳಿ ಬಗ್ಗೆ ವಿಪರೀತಾರ್ಥಗಳನ್ನು ಕಲ್ಪಿಸಿಕೊಳ್ಳುತ್ತಿರುವ ಬಗ್ಗೆ ನಾನು ಕೇಳಿದ್ದೇನೆ.  ಕಳೆದ 30 ವರ್ಷಗಳ ಬದುಕಿನಲ್ಲಿ ಇಂತಹ ಟೀಕೆಗಳು ನನ್ನ ಬದುಕಿನ ಅಂಗವೇ ಆಗಿ ಹೋಗಿವೆ. ಇವಲ್ಲ ನನ್ನ ಸ್ಫೂರ್ತಿಯನ್ನು ಕುಂದಿಸುವಲ್ಲಿ ವಿಫಲವಾಗಿವೆ. ಇಂತಹ ಚರ್ಚೆಗಳು ನನಗೆ ಇನ್ನಷ್ಟು ಬಲ ನೀಡಿ ನಾನು ಆಯ್ಕೆ ಮಾಡಿಕೊಂಡ ಮಾರ್ಗದಲ್ಲಿ ದೃಢವಾಗಿ ಮುನ್ನಡೆಯುವಂತೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತನಾಗಿ ದುಡಿಯುವವರು ತಮ್ಮ ~ಅಹಂ~ಗಳನ್ನು ಬದಿಗಿಡಬೇಕು ಮತ್ತು ಅಪಮಾನ ಹಾಗೂ  ತೇಜೋವಧೆಗಳನ್ನು ಕರಗಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬೇಕು ಎಂಬುದು ಕಾಲಾತೀತ ಸತ್ಯ ಎಂದು ಅಣ್ಣಾ ~ಬ್ಲಾಗ್~ನಲ್ಲಿ ಬರೆದಿದ್ದಾರೆ.

~ಆಗ ಮಾತ್ರವೇ ನೀವು ಸಾಮಾಜಿಕ ಕಾರ್ಯಕರ್ತರಾಗಿ ದೇಶಕ್ಕಾಗಿ ಏನಾದರೂ ರಚನಾತ್ಮಕ ಕೆಲಸ ಮಾಡಲು ಸಾಧ್ಯ. ಜನ ಯಾವಾಗಲೂ ಹಣ್ಣುಗಳಿರುವ ಮರಕ್ಕೆ ಕಲ್ಲೆಸೆಯುತ್ತಾರೆ. ಹಣ್ಣಿಲ್ಲದ ಬೋಳುಮರಕ್ಕೆ ಕಲ್ಲೆಸುವುದು ವ್ಯರ್ಥ ಪ್ರಯತ್ನವಾಗುತ್ತದೆ~ ಎಂದು 74ರ ಹರೆಯದ ಸಾಮಾಜಿಕ ಕಾರ್ಯಕರ್ತ ತಮ್ಮ ಟೀಕಾಕಾರರ ಹೆಸರುಗಳನ್ನು ಉಲ್ಲೇಖಿಸದೆಯೇ ಹೇಳಿದ್ದಾರೆ.

~ನಾನು ನನ್ನ ಅಂತಸ್ಸಾಕ್ಷಿಯಂತೆ ನಡೆಯುತ್ತೇನೆ ಮತ್ತು ಇತರರು ಏನು ಹೇಳುತ್ತಾರೆ ಎಂಬುದನ್ನು ನಿರ್ಲಕ್ಷಿಸುತ್ತೇನೆ. ನನ್ನ ಬದ್ಧತೆಗಳು ಯಾವಾಗಲೂ ಅವುಗಳನ್ನು ಕೃತಿಗಿಳಿಸಲು ಸಜ್ಜಾಗಿಯೇ ಇರುತ್ತವೆ. ಯಾವಾಗಲೂ ಸತ್ಯದ ಮಾರ್ಗದಲ್ಲಿ ನಡೆಯುತ್ತೇನೆ. ಏಕೆಂದರೆ ಸತ್ಯವೇ ಅಂತಿಮ. ಯಾರೊಬ್ಬರೂ ಸತ್ಯವನ್ನು ಸುಳ್ಳು ಮಾಡಲು ಸಾಧ್ಯವಿಲ್ಲ~ ಎಂದು ಅವರು ಹೇಳಿದ್ದಾರೆ.

ಚಳವಳಿ ~ರಾಜಕೀಯ ತಿರುವು~ ಪಡೆದುಕೊಳ್ಳುತ್ತಿದೆ ಮತ್ತು ಗೊಂದಲಮಯಗೊಳ್ಳುತ್ತಿದೆ ಎಂದು ಆಕ್ಷೇಪಿಸಿ ಪಿ.ವಿ. ರಾಜಗೋಪಾಲ್ ಮತ್ತು ರಾಜೇಂದ್ರ ಸಿಂಗ್ ಅವರು ಅಣ್ಣಾ ತಂಡದಿಂದ ನಿರ್ಗಮಿಸಿದ ಒಂದು ದಿನದ ಬಳಿಕ ಅಣ್ಣಾ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.