ADVERTISEMENT

ಅಸಾರಾಮ್‌ಗೆ ಜಾಮೀನು ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಜೋಧಪುರ (ಪಿಟಿಐ/ಐಎಎನ್‌ಎಸ್): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಬಂಧಿತರಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರಿಗೆ ಇಲ್ಲಿನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನಡೆಯಿತು.  `ಎಫ್‌ಐಆರ್‌ನಲ್ಲಿ ಹೆಸರಿಸಿರುವ ಶಿಲ್ಪಿ (ಹಾಸ್ಟೆಲ್ ವಾರ್ಡನ್) ಹಾಗೂ ಶರದ್ (ಗುರುಕುಲದ ಮೇಲ್ವಿಚಾರಕ) ತಲೆಮರೆಸಿಕೊಂಡಿದ್ದು, ತನಿಖೆಯನ್ನು ಪೂರ್ಣಗೊಳಿಸಲು ಇವರಿಬ್ಬರನ್ನು ಪ್ರಶ್ನೆಗೊಳಪಡಿಸಬೇಕಾಗುತ್ತದೆ' ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆನಂದ್ ಪುರೋಹಿತ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಘಟನೆ ನಡೆದ ಜೋಧಪುರದ ಬದಲು ದೆಹಲಿಯಲ್ಲಿ ಎಫ್‌ಐಆರ್ ದಾಖಲಿಸಿದ್ದನ್ನು ಅವರು ಸಮರ್ಥಿಸಿಕೊಂಡರು.

ಆರಂಭದಲ್ಲಿ ಬಾಲಕಿ ತನಗೆ ಏನಾಗಿದೆ ಎಂದು ಪೋಷಕರಿಗೆ ತಿಳಿಸಿರಲಿಲ್ಲ. ಈ ವಿಷಯ ಗೊತ್ತಾದಾಗ ಪೋಷಕರು ಅಸಾರಾಮ್ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಬಾಲಕಿಯ ತಂದೆ ದೆಹಲಿ ಪೊಲೀಸರಿಗೆ ದೂರು ನೀಡಿದರು ಎಂದು ಪುರೋಹಿತ್ ತಿಳಿಸಿದರು.

ಘಟನೆ ನಡೆದ ಎರಡು ದಿನಗಳ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಯಾಕೆ ಎಂದು ಅಸಾರಾಮ್ ಪರ ವಕೀಲರ ಪ್ರಶ್ನೆ ಕುರಿತಂತೆ ಕೇಳಿದಾಗ, `ಬಾಲಕಿಗೆ ಆಘಾತವಾಗಿತ್ತು. ಆಕೆಯಲ್ಲಿ ಧೈರ್ಯ ತುಂಬಿ ಆ ಬಳಿಕ ದೂರು ನೀಡಲಾಯಿತು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.