ADVERTISEMENT

ಅಸ್ಸಾಂ ಹಿಂಸಾಚಾರ; ಸಿಬಿಐ ತನಿಖೆ, ಸೇನೆಗೆ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ನಡೆದ ಹಿಂಸಾಚಾರದ ಕುರಿತು ಸಿಬಿಐ ತನಿಖೆ ಆರಂಭಿಸಿದ್ದು, ಸೇನೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸರ್ಕಾರ, ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ ಎಂದು ಪ್ರತಿಪಕ್ಷಗಳಿಗೆ ಗುರುವಾರ ಸವಾಲು ಎಸೆಯಿತು.

ಕಾಂಗ್ರೆಸ್ಸಿನ ಮತ ಬ್ಯಾಂಕ್ ರಾಜಕಾರಣದಿಂದಾಗಿ ಅಸ್ಸಾಂ ಅಸುರಕ್ಷಿತವಾಗಿದೆ ಎಂದು ಪ್ರತಿ ಪಕ್ಷವಾದ ಬಿಜೆಪಿಯು ರಾಜ್ಯಸಭೆಯಲ್ಲಿ ಮಾಡಿದ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹೀಗೆ ಹೇಳಿತು.  ಪ್ರತಿಪಕ್ಷ ಸದಸ್ಯರು ಇದರಿಂದ ಸಮಾಧಾನಗೊಳ್ಳದೆ ಗದ್ದಲ ಮುಂದುವರಿಸಿದಾಗ ಶಿಂಧೆ ಅವರು ಮಾತನಾಡಿ, `ಸೇನೆಗೆ ಕಟ್ಟೆಚ್ಚರ ವಹಿಸಲು ಈಗಾಗಲೇ ಸೂಚಿಸಿದ್ದೇನೆ. ನಿಮಗೆ ಇನ್ನೇನು ಬೇಕು~ ಎಂದರು.
 
ಇದಕ್ಕೆ ಮುನ್ನ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಈ ಕುರಿತು ಮಾತನಾಡಿದರು. ಅಸ್ಸಾಂನಲ್ಲಿ ಸರ್ಕಾರವು ಮತ ಬ್ಯಾಂಕ್ ರಾಜಕಾರಣ ನೀತಿ ಅನುಸರಿಸುತ್ತಿದೆ. ಅಲ್ಲಿನ ಹಿಂಸಾಚಾರ ಘಟನೆಗಳಿಗೆ ಈ ನೀತಿಯೇ ಕಾರಣ. ಇದೇ ನೀತಿ ಮುಂದುವರಿದರೆ, ಅಸ್ಸಾಂ ಆಡಳಿತವು ಸುರಕ್ಷಿತರ ಕೈಯಲ್ಲಿಲ್ಲ ಎಂದೇ ಹೇಳಬೇಕಾಗುತ್ತದೆ ಎಂದರು.
 
ಸರ್ಕಾರವು ತನ್ನ ಮತ ಬ್ಯಾಂಕ್ ನೀತಿಯ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವ ಜತೆಗೆ ಅಸ್ಸಾಂನಲ್ಲಿ ಅಕ್ರಮ ನುಸುಳುವಿಕೆಯು ನಿಜವಾದ ಸಮಸ್ಯೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.