ಹೈದರಾಬಾದ್(ಪಿಟಿಐ): ‘ತೆಲುಗು ಜನರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಲು’ ಹೊಸ ಪಕ್ಷ ರಚಿಸುವುದಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಗುರುವಾರ ಇಲ್ಲಿ ಘೋಷಿಸಿದರು.
ತೆಲಂಗಾಣ ರಾಜ್ಯ ರಚನೆಯ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಆರಂಭದಿಂದಲೂ ಸಂಘರ್ಷ ಮಾಡುತ್ತಲೇ ಬಂದ ರೆಡ್ಡಿ ಈಚೆಗೆ ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
‘ಪಕ್ಷದ ಹೆಸರು, ಅದರ ಸಿದ್ಧಾಂತಗಳು ಮತ್ತು ಇತರೆ ಮಾಹಿತಿಯನ್ನು ಮಾ.12ರಂದು ರಾಜಮಂಡ್ರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಕಟಿಸಲಾಗುವುದು’ ಎಂದು ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಈ ವೇಳೆ ಕಾಂಗ್ರೆಸ್ನಿಂದ ಅಮಾನತುಗೊಂಡ ಮೂವರು ಸಂಸದರೂ ಇದ್ದರು.
ಹೊಸ ಪಕ್ಷವು ತೆಲುಗರ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಲಿದೆ. ಪಕ್ಷ ಸೀಮಾಂಧ್ರ ಮತ್ತು ತೆಲಂಗಾಣದವರಿಗೆ ಸೀಮಿತವಾಗಿರದೆ ಬೇರೆಡೆ ವಾಸಿಸುತ್ತಿರುವ ತೆಲುಗು ಜನರ ಅಭಿವೃದ್ಧಿಗೂ ಶ್ರಮಿಸಲಿದೆ ಎಂದು ರೆಡ್ಡಿ ಹೇಳಿದರು.
ತೆಲುಗು ದೇಶಂ ಪಕ್ಷ ಮತ್ತು ವೈಎಸ್ಆರ್ ಕಾಂಗ್ರೆಸ್ ಕೂಡ ಆಂಧ್ರಪ್ರದೇಶವನ್ನು ವಿಭಜಿಸುವಲ್ಲಿ ಪಾತ್ರ ವಹಿಸಿವೆ. ಆದ್ದರಿಂದಲೇ ಹೊಸ ಪಕ್ಷ ಆರಂಭಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.