ಹೈದರಾಬಾದ್: ಕಿರುತೆರೆ ನಟಿ ಹೇಮಶ್ರೀ ಸಂಶಯಾಸ್ಪದ ಸಾವಿನ ಹಿಂದೆ ಅನಂತಪುರ ಜಿಲ್ಲೆಗೆ ಸೇರಿರುವ ಆಂಧ್ರಪ್ರದೇಶದ ಸಚಿವರೊಬ್ಬರ ಕೈವಾಡವಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಆರೋಪಿಸಿದೆ.
ವಿಜಯವಾಡದಲ್ಲಿ ಮಂಗಳವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಟಿಡಿಪಿಯ ಹಿರಿಯ ನಾಯಕ ವರ್ಲಾ ರಾಮಯ್ಯ ಈ ಆರೋಪ ಮಾಡ್ದ್ದಿದು, `ಹೇಮಶ್ರೀ ಪತಿ ಸುರೇಂದ್ರ ಬಾಬು ಹಾಗೂ ಕಾಂಗ್ರೆಸ್ನ ಇಬ್ಬರು ಮಾಜಿ ನಗರಪಾಲಿಕೆ ಸದಸ್ಯರು ಆಂಧ್ರದ ಸಚಿವರೊಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೇಮಶ್ರೀಯನ್ನು ದಾಳವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ರಾಜ್ಯ ಸರ್ಕಾರ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ. ನೈತಿಕ ಹೊಣೆ ಹೊತ್ತು ಗೃಹ ಸಚಿವೆ ಸಬೀತಾ ಇಂದ್ರಾ ರೆಡ್ಡಿ ರಾಜೀನಾಮೆ ನೀಡಬೇಕು. ಪೊಲೀಸರಿಗೆ ಪ್ರಕರಣದಲ್ಲಿ ಭಾಗಿಯಾದ ಸಚಿವರ ಹೆಸರು ಗೊತ್ತಿದೆ. ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರಿಗೆ ನೈತಿಕ ಜವಾಬ್ದಾರಿ ಇದ್ದಲ್ಲಿ ಅವರು ಆ ಸಚಿವರ ಹೆಸರು ಹೇಳಲಿ. ಇಲ್ಲವೇ ರಾಜೀನಾಮೆ ನೀಡಲಿ~ ರಾಮಯ್ಯ ಆಗ್ರಹಿಸಿದ್ದಾರೆ.
ಅನಂತಪುರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ರಾಯಲ್ಸೀಮಾ ಐಜಿ ಗೋವಿಂದ್ ಸಿಂಗ್, `ಈ ಪ್ರಕರಣ ಮುಚ್ಚಿಹಾಕುವಂತೆ ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಕರ್ನಾಟಕದ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಆಂಧ್ರ ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.