ನವದೆಹಲಿ: ಆಧಾರ್ ಒದಗಿಸದ ಕಾರಣಕ್ಕೆ ಪಿಂಚಣಿ ವಿತರಣೆ ತಡೆಹಿಡಿಯಬಾರದು ಎಂದು ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (ಇಪಿಎಫ್ಒ) ಸೂಚಿಸಿದೆ.
ಈ ಸಂಬಂಧ ‘ಇಪಿಎಫ್ಒ’, ಪಿಂಚಣಿ ವಿತರಿಸುವ ಬ್ಯಾಂಕ್ಗಳು ಮತ್ತು ಅಂಚೆ ಇಲಾಖೆಗೆ ಸುತ್ತೋಲೆ ಕಳಿಸಿದೆ. ಆಧಾರ್ ಹೊಂದಿಲ್ಲದವರಿಗೆ ಅದೇ ಒಂದು ಕಾರಣಕ್ಕೆ ಪಿಂಚಣಿ ನಿರಾಕರಿಸಬಾರದು. ಅಗತ್ಯ ಬಿದ್ದರೆ ಇತರ ಪರ್ಯಾಯ ಮಾರ್ಗೋಪಾಯ ಮತ್ತು ಗುರುತು ದೃಢೀಕರಿಸುವ ವಿಧಾನಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದೆ.
ವಯೋವೃದ್ಧರು ಬೆರಳ ಗುರುತಿನ ಮೂಲಕ ತಮ್ಮ ಗುರುತು ದೃಢಪಡಿಸಲು ಸಾಧ್ಯವಾಗದಿದ್ದಾಗ ಬ್ಯಾಂಕ್ಗಳು ಪಿಂಚಣಿದಾರರ ಕಣ್ಣಿನ ಪಾಪೆ ಆಧರಿಸಿ ಗುರುತು ದೃಢಿಕರಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕು.
ನಿವೃತ್ತರು ಬದುಕಿರುವ ಬಗ್ಗೆ ಕಾಗದ ರೂಪದಲ್ಲಿ ಪ್ರಮಾಣಪತ್ರ ಸಲ್ಲಿಸುವುದನ್ನು 2016ರ ನಂತರ ಬದಲಿಸಲಾಗಿದೆ. ಡಿಜಿಟಲ್ ರೂಪದಲ್ಲಿ ‘ಜೀವನ್ ಪ್ರಮಾಣ್’ ಸಲ್ಲಿಸುವುದನ್ನು ಜಾರಿಗೆ ತರಲಾಗಿದೆ. ‘ಜೀವನ್ ಪ್ರಮಾಣ’ ಸಲ್ಲಿಸಲು ಮೊಬೈಲ್ ಉಮಂಗ್ ಆ್ಯಪ್ ಬಳಸಬಹುದಾಗಿದೆ.
ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಲು ಸಾಧ್ಯವಿಲ್ಲದ ವಯೋವೃದ್ಧರಿಗಾಗಿ ಬ್ಯಾಂಕ್ಗಳು ವಿಶೇಷ ವ್ಯವಸ್ಥೆ ಮಾಡಬೇಕು ಎಂದೂ ‘ಇಪಿಎಫ್ಒ’ ಸಲಹೆ ನೀಡಿದೆ. ಇ–ಆಧಾರ್ ಕಾರ್ಡ್ ಇಲ್ಲವೇ ಆಧಾರ್ ಪಡೆಯಲು ಅರ್ಜಿ ಸಲ್ಲಿಸಿರುವ ಮಾಹಿತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.