ಘಾಜಿಯಾಬಾದ್ (ಐಎಎನ್ಎಸ್): ಪುತ್ರಿ ಆರುಷಿ ತಲ್ವಾರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದಂತ ವೈದ್ಯೆ ನೂಪುರ್ ತಲ್ವಾರ್ ಅವರ ಜಾಮೀನು ಅರ್ಜಿಯ ತೀರ್ಪನ್ನು ವಿಶೇಷ ನ್ಯಾಯಾಲಯ ಬುಧವಾರದವರೆಗೆ ಕಾಯ್ದಿರಿಸಿರುವ ಕಾರಣ ಅವರು ಇನ್ನೊಂದು ರಾತ್ರಿಯನ್ನು ಜೈಲಿನಲ್ಲೇ ಕಳೆಯಬೇಕಾಗಿದೆ.
ಜಾಮೀನು ಅರ್ಜಿಯ ಸಂಬಂಧದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ನೂಪುರ್ ಪರ ವಕೀಲರು ಮತ್ತು ಸಿಬಿಐ ತನ್ನ ವಾದವನ್ನು ಮಂಡಿಸಿದ್ದು, ಜಾಮೀನು ಕುರಿತು ನ್ಯಾಯಾಲಯ ಬುಧವಾರ ಆದೇಶ ನೀಡಲಿದೆ.
ನೂಪುರ್ ತಲ್ವಾರ್ ಸೋಮವಾರ ರಾತ್ರಿಯನ್ನು ದಸ್ನಾ ಜೈಲಿನಲ್ಲಿ ಕಳೆದಿದ್ದು, ಮಂಗಳವಾರ ಕೋರ್ಟಿಗೆ ಅವರನ್ನು ಕರೆ ತಂದಿರಲಿಲ್ಲ. ಈಗಾಗಲೇ ಜಾಮೀನ ಮೇಲೆ ಹೊರಗಿರುವ ಆಕೆಯ ಪತಿ ರಾಜೇಶ್ ತಲ್ವಾರ್ ಕೂಡ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.
ಅವಳಿ ಕೊಲೆ ಪ್ರಕರಣದಲ್ಲಿ `ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಜಾಮೀನು ನೀಡಬೇಕು~ ಎಂದು ಆಕೆಯ ವಕೀಲರು ತಮ್ಮ ವಾದ ಮಂಡಿಸಿದರು.
`ಮನೆಯ ಗೇಟಿಗೆ ಹೊರಗಿನಿಂದ ಚಿಲಕ ಹಾಕಿದ್ದು ಕೊಲೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ ಎನ್ನುವ ವಾದವನ್ನು ಸಿಬಿಐ ಯಾಕೆ ತಳ್ಳಿಹಾಕುತ್ತದೆ~ ಎಂದು ನೂಪುರ್ ವಕೀಲರು ಪ್ರಶ್ನಿಸಿದರು. `ಅಲ್ಲದೆ ನೂಪುರ್ ಮಗುವೊಂದರ ತಾಯಿ. ಅಲ್ಲದೆ ಅವರಿಗೆ ಆ ಉದ್ದೇಶ ಇದ್ದರೆ ಹಿಂದಿನ ದಿನ ತನ್ನ ಮಗಳಿಗೆ ಕ್ಯಾಮೆರಾ ಯಾಕೆ ಖರೀದಿಸಿ ತರುತ್ತಿದ್ದರು~ ಎಂದು ಪ್ರಶ್ನಿಸಿ ಕೊಲೆಯಲ್ಲಿ ಅವರ ಪಾತ್ರವಿಲ್ಲ ಎಂದು ವಾದಿಸಿದರು.
ಜೈಲಿನಲ್ಲಿ: ನೂಪುರ್ ಅವರು ದಸ್ನಾ ಜೈಲಿನ ಬ್ಯಾರಕ್ ಸಂಖ್ಯೆ 13ರಲ್ಲಿ, ಇತರ 70 ಮಹಿಳಾ ಕೈದಿಗಳ ಜೊತೆ ಇದ್ದು ಮಂಗಳವಾರ ಬೆಳಿಗ್ಗೆ ಉಪಹಾರ ಸೇವಿಸಿದರು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.