ನವದೆಹಲಿ (ಪಿಟಿಐ, ಐಎಎನ್ಎಸ್): ರಾಜಧಾನಿಯಲ್ಲಿ ಕಳೆದ ಡಿ. 16ರಂದು ವಿದ್ಯಾರ್ಥಿನಿ ಅತ್ಯಾಚಾರ- ಹತ್ಯೆ ಪ್ರಕರಣದ ಆರೋಪಿ ಬಾಲಕನ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಬಾಲ ನ್ಯಾಯಮಂಡಳಿ (ಜೆಜೆಬಿ) ಜುಲೈ 25ಕ್ಕೆ ಮುಂದೂಡಿ ಗುರುವಾರ ಆದೇಶ ಹೊರಡಿಸಿದೆ.
ಪ್ರಧಾನ ಮ್ಯಾಜಿಸ್ಟ್ರೇಟ್ ಗೀತಾಂಜಲಿ ಗೋಯೆಲ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ಆರೋಪಿ ಪರ ವಕೀಲರು ಮತ್ತು ಸರ್ಕಾರಿ ವಕೀಲರು ತಮ್ಮ ಸ್ಪಷ್ಟೀಕರಣಗಳನ್ನು ಸಲ್ಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತು. ಅಲ್ಲದೆ, ತೀರ್ಪು ಹೊರಬೀಳುವ ತನಕ ಯಾವುದೇ ವದಂತಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಸಲಹೆ ನೀಡಿತು.
ವರದಿಗೆ ಅನುಮತಿ: ಡಿ.16ರ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದ ವಿಚಾರಣಾ ಕಲಾಪವನ್ನು ವರದಿ ಮಾಡಲು ದೆಹಲಿ ಹೈಕೋರ್ಟ್ ಮೂರು ಅಂತರರಾಷ್ಟ್ರೀಯ ಸುದ್ದಿಸಂಸ್ಥೆಗಳಾದ ರಾಯಿಟರ್ಸ್, ಅಸ್ಸೋಸಿಯೇಟೆಡ್ ಪ್ರೆಸ್ (ಎಪಿ) ಹಾಗೂ ಏಜೆನ್ಸ್ ಫ್ರಾನ್ಸ್ ಪ್ರೆಸ್ (ಎಎಫ್ಪಿ)ಗೆ ಗುರುವಾರ ಅನುಮತಿ ನೀಡಿದೆ. ಆದರೆ ಸ್ವತಂತ್ರ ವಿದೇಶಿ ಪತ್ರಕರ್ತರು ಈ ವಿಷಯದಲ್ಲಿ ಕೋರ್ಟ್ ಕಲಾಪವನ್ನು ವರದಿ ಮಾಡುವುದಕ್ಕೆ ಅವಕಾಶ ನಿರಾಕರಿಸಿತು.
ವಿದೇಶಿ ಬಾತ್ಮೀದಾರರ ಕ್ಲಬ್ ಸದಸ್ಯರು ತಮ್ಮ ವಕೀಲೆ ಮೀನಾಕ್ಷಿ ಲೇಖಿ ಅವರ ಮೂಲಕ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಕೋರ್ಟ್ ಕಲಾಪ ವರದಿಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಾಜೀವ್ ಶೇಖ್ಧರ್ ಈ ತೀರ್ಪು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.