ಚೆನ್ನೈ: ವಿದೇಶದಲ್ಲಿರುವ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿಲ್ಲವೆಂಬ ಆರೋಪದಡಿ ಆದಾಯ ತೆರಿಗೆ ಇಲಾಖೆ ತಮ್ಮ ಕುಟುಂಬದ ವಿರುದ್ಧ ಸಲ್ಲಿರುವ ಆರೋಪಪಟ್ಟಿ ಯಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕುಟುಂಬ ಹೇಳಿದೆ.
‘ಕುಟುಂಬದ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ಆರೋಪಗಳನ್ನು ಕಾನೂನು ಪ್ರಕಾರವೇ ಎದುರಿಸಲಾಗುವುದು’ ಎಂದು ಕುಟುಂಬದ ಸದಸ್ಯರ ಪರವಾಗಿ ಲೆಕ್ಕ ಪರಿಶೋಧಕರು ಬಿಡುಗಡೆ ಮಾಡಿರುವ ಎರಡು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ, ಸೊಸೆ ಶ್ರೀನಿಧಿ ಹಾಗೂ ಕಾರ್ತಿ ಪರವಾಗಿ ಈ ಹೇಳಿಕೆಗಳನ್ನು ಬಿಡುಗಡೆ ಮಾಡಲಾಗಿದೆ.
‘ಆರೋಪ ಪಟ್ಟಿಯಲ್ಲಿ ಉಲ್ಲೇಖಿಸ ಲಾಗಿರುವ ಆಸ್ತಿ ಹಾಗೂ ಹೂಡಿಕೆಗಳ ಬಗ್ಗೆ ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಸ್ಪಷ್ಟವಾಗಿಯೇ ಉಲ್ಲೇಖಿಸಲಾಗಿದೆ’ ಎಂದೂ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಹೂಡಿಕೆಗಳ ಬಗ್ಗೆ ಉದ್ದೇಶ ಪೂರ್ವಕವಾಗಿಯೇ ಬಹಿರಂಗಪಡಿಸಿಲ್ಲ ಎಂಬ ಆರೋಪ ಸರಿಯಲ್ಲ. ಆದಾಯ ತೆರಿಗೆ ರಿಟರ್ನ್ಸ್ ಅನ್ನು ಚಾರ್ಟರ್ಡ್ ಅಕೌಂಟಂಟ್ಸ್ ಸಲಹೆಯಂತೆ ಸಿದ್ಧಪಡಿಸಿ, ಸಲ್ಲಿಸಲಾಗಿದೆ. ಅಲ್ಲದೇ, ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಹೂಡಿಕೆಗಳಿಗೆ ಬ್ಯಾಂಕ್ ಮೂಲಕವೇ ಪಾವತಿಸಲಾಗಿದೆ’ ಎಂದೂ ಪ್ರಕಟಣೆಗಳಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.