ADVERTISEMENT

ಆರ್.ಕೆ.ನಾರಾಯಣ್ ಮನೆ ಖರೀದಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಸಾಹಿತಿ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು `ಪಾರಂಪರಿಕ ಕಟ್ಟಡ~ ಎಂದು ಘೋಷಿಸಿರುವ ಸರ್ಕಾರ ಈಗ ಅದರ ಖರೀದಿಗೂ ಮುಂದಾಗಿದೆ.

ಮೈಸೂರಿನ ಯಾದವಗಿರಿಯಲ್ಲಿ ನಾರಾಯಣ್ ಅವರ ಮನೆ ಇದ್ದು, ಅದನ್ನು ನೆಲಸಮ ಮಾಡಿ ಆ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಇತ್ತೀಚೆಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ಬಂದ ನಂತರ ಸರ್ಕಾರ ಅದನ್ನು ನೆಲಸಮ ಮಾಡಲು ಕೊಟ್ಟಿದ್ದ ಅನುಮತಿಯನ್ನು ರದ್ದು ಮಾಡಿದ್ದಲ್ಲದೆ, ಅದನ್ನು ಪಾರಂಪರಿಕ ಕಟ್ಟಡ ಎಂದೂ ಘೋಷಿಸಿತು.

ಇದರ ಬೆನ್ನಿಗೇ ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಬುಧವಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ಅದರ ಮೌಲ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಗದರ್ಶಿ ದರದ ಪ್ರಕಾರ ಆ ಅಸ್ತಿಯ ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ. ಆದರೆ, ಮಾರುಕಟ್ಟೆ ದರ 3 ರಿಂದ 4 ಕೋಟಿ ರೂಪಾಯಿ ಆಗುತ್ತದೆ ಎಂದು ರಾಯ್ಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಮನೆ ಖರೀದಿಗೆ ಹಣದ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯ ಎಂದೂ ಅವರು ಹೇಳಿದ್ದಾರೆ. ಮಾರ್ಗದರ್ಶಿ ದರ ಮತ್ತು ಮಾರುಕಟ್ಟೆ ದರಗಳನ್ನು ತುಲನೆ ಮಾಡಿ, ಮಾರ್ಗದರ್ಶಿ ದರಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮನೆ ಖರೀದಿಸಿ, ಅದನ್ನು ಸಂರಕ್ಷಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.