ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಬ್ಯಾಂಕ್ ಖಾತೆಯಿಂದ ವಾರಕ್ಕೆ ₹ 2 ಲಕ್ಷ ನಗದು ಹಿಂಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗ ಮಾಡಿರುವ ಮನವಿಯನ್ನು ಆರ್ಬಿಐ ತಿರಸ್ಕರಿಸಿದೆ. ಇದು ಆಯೋಗ ಮತ್ತು ಆರ್ಬಿಐ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ನೋಟು ರದ್ದತಿ ನಂತರ ಹೇರಲಾಗಿರುವ ಹಣ ತೆಗೆಯುವ ಮಿತಿಯನ್ನು ಅಭ್ಯರ್ಥಿಗಳಿಗೆ ಮಾತ್ರ ಸಡಿಲಿಸುವಂತೆ ಚುನಾವಣಾ ಆಯೋಗ ಆರ್ಬಿಐಗೆ ಕೋರಿಕೆ ಸಲ್ಲಿಸಿತ್ತು. ಈ ಸಂಬಂಧ ಚುನಾವಣಾ ಆಯೋಗ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಪತ್ರ ಬರೆದಿತ್ತು. ಆದರೆ, ಈ ಬೇಡಿಕೆಯನ್ನು ಆರ್ಬಿಐ ತಳ್ಳಿ ಹಾಕಿದೆ. ಇದು ಚುನಾವಣಾ ಆಯೋಗದ ಅಸಮಾಧಾನಕ್ಕೆ ಕಾರಣವಾಗಿದೆ.
ಆಯೋಗದ ಚುನಾವಣಾ ವೆಚ್ಚ ವಿಭಾಗದ ಮಹಾ ನಿರ್ದೇಶಕ ದಿಲೀಪ್ ಶರ್ಮಾ ಅವರು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವವನ್ನು ಮತ್ತೊಮ್ಮೆ ಪರಿಗಣಿಸುವಂತೆ ಕೋರಿದ್ದಾರೆ.
‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಸಂವಿಧಾನಬದ್ಧ ಹಕ್ಕು’ ಎಂದು ಪತ್ರದಲ್ಲಿ ಹೇಳಿರುವ ಶರ್ಮಾ, ‘ಆಯೋಗವು ನೀಡುವ ನಿರ್ದೇಶನಗಳನ್ನು ಪಾಲಿಸಲೇ ಬೇಕು’ ಎಂದಿದ್ದಾರೆ.
‘ವಿಷಯದ ಗಾಂಭೀರ್ಯ ಆರ್ಬಿಐಗೆ ಅರ್ಥವಾದಂತೆ ಕಾಣುತ್ತಿಲ್ಲ. ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸುವುದು ಆಯೋಗದ ಸಾಂವಿಧಾನಿಕ ಕರ್ತವ್ಯ ಎಂದು ಮತ್ತೆ ಹೇಳಬೇಕಾಗಿದೆ’ ಎಂದು ಶರ್ಮಾ ಕಟು ಶಬ್ದಗಳಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.