
ಚೆನ್ನೈ (ಪಿಟಿಐ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ಗಡ್ಕರಿ ಅವರನ್ನು ಎರಡನೇ ಅವಧಿಗೂ ಮುಂದುವರಿಸುವ ಬಗ್ಗೆ ಆ ಪಕ್ಷವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಹೇಳಿದರು.
`ಇದು ಸಂಘಕ್ಕೆ ಸಂಬಂಧಿಸಿದ ವಿಷಯವಲ್ಲ. ರಾಜಕೀಯ ಪಕ್ಷಗಳು ತಮ್ಮದೇ ಆದ ವ್ಯವಸ್ಥೆ ಹೊಂದಿವೆ. ನಾವು ಅದರಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ~ ಎಂದು ನಗರದ ಹೊರವಲಯದಲ್ಲಿ ಭಾನುವಾರ ಕೊನೆಗೊಂಡ ಮೂರು ದಿನಗಳ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಸುದ್ದಿಗಾರರಿಗೆ ಜೋಷಿ ಈ ವಿಷಯ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಗಡ್ಕರಿ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ಆರ್ಎಸ್ಎಸ್ ಸಮ್ಮತಿ ಸೂಚಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾರ ವಿರುದ್ಧವೂ ಮೃದು ಧೋರಣೆ ತಾಳುವ ಪ್ರಶ್ನೆಯೇ ಇಲ್ಲ. ಎಲ್ಲವೂ ಕಾನೂನು ರೀತ್ಯ ನಡೆಯಬೇಕು ಎಂದು ಹೇಳಿದರು.
ಗಡ್ಕರಿ ಒಡೆತನದ ಉದ್ದಿಮೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪ ಕೇಳಿ ಬಂದ ನಂತರದಿಂದ ಸಂಘ ಅಂತರ ಕಾಯ್ದುಕೊಂಡಿದೆ.
`ಸಭೆಯಲ್ಲಿ ಗಡ್ಕರಿ ಅವರಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಯಲಿಲ್ಲ. ಅವರ ವಿರುದ್ಧದ ಯಾವುದೇ ಆರೋಪ ಸಾಬೀತಾಗಿಲ್ಲ. ಆದರೆ, ತನಿಖೆ ನಡೆಸುವ ಅಗತ್ಯವಿದೆ~ ಎಂದಷ್ಟೇ ನುಡಿದರು.
`ಆರ್ಎಸ್ಎಸ್ ಗರಡಿಯಲ್ಲೇ ಬೆಳೆದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಗಡ್ಕರಿ ವಿರುದ್ಧ ಸಂಘ ಆಂತರಿಕ ತನಿಖೆ ನಡೆಸಲಿದೆಯೇ~ ಎನ್ನುವ ಪ್ರಶ್ನೆಗೆ, `ಸಂಘದಲ್ಲಿ ಇಂತಹ ನಿಯಮವಿಲ್ಲ~ ಎಂದರು.
`2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ~ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಅವರು, `ಇದು ನಮಗೆ ಸಂಬಂಧಿಸಿದ ವಿಷಯವಲ್ಲ~ ಎಂದು ಚುಟುಕಾಗಿ ಹೇಳಿದರು.
`ಒಂದುವೇಳೆ ರಾಜಕೀಯ ಪಕ್ಷಗಳು ತೀರ್ಮಾನ ಕೈಗೊಂಡರೆ, ನಾವು ಈ ನಿಟ್ಟಿನಲ್ಲಿ ಯೋಚಿಸುತ್ತೇವೆ~ ಎಂದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಕರ್ನಾಟಕ ಪಾಲಿಸಬೇಕು. ದೇಶದ ಅತ್ಯುನ್ನತ ಸಂಸ್ಥೆ ನೀಡಿರುವ ಸೂಚನೆಯನ್ನು ಅದು ಜಾರಿಗೊಳಿಸಬೇಕು~ ಎಂದು ಪ್ರಶ್ನೆಯೊಂದಕ್ಕೆ ಈ ರೀತಿ ಹೇಳಿದರು.
ಚೀನಾ ದೇಶವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ರಾಷ್ಟ್ರೀಯ ಭದ್ರತಾ ನೀತಿಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುವಂತೆ ಒತ್ತಾಯಿಸಿ ಮೂರು ದಿನಗಳ ಆರ್ಎಸ್ಎಸ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.