ADVERTISEMENT

ಇಂದಿನಿಂದ ಮತ್ತೆ ಅಧಿವೇಶನ ಬ್ಯಾಂಕ್‌ ಹಗರಣ ಪ್ರಸ್ತಾಪ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:35 IST
Last Updated 4 ಮಾರ್ಚ್ 2018, 19:35 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರ ಆರಂಭವಾಗಲಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಅವರು ಸುಮಾರು ₹12 ಸಾವಿರ ಕೋಟಿ ವಂಚಿಸಿ ಪರಾರಿಯಾಗಿರುವುದನ್ನು ಹಿಡಿದುಕೊಂಡು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿ ರಾಜ್ಯಸಭೆಯಲ್ಲಿ ನಿಲುವಳಿ ಮಂಡಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ರೊಟೊಮ್ಯಾಕ್‌ ಕಂಪನಿ, ದ್ವಾರಕಾದಾಸ್‌ ಸೇಠ್‌ ಜುವೆಲ್ಲರ್ಸ್‌ ಸೇರಿ ವಿವಿಧ ಆಭರಣ ವ್ಯಾಪಾರಿಗಳು ಬ್ಯಾಂಕುಗಳಿಗೆ ವಂಚನೆ ಮಾಡಿರುವ ವಿಚಾರವನ್ನೇ ಚರ್ಚೆಯ ಕೇಂದ್ರವಾಗಿಸಲು ವಿರೋಧ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.

ಕಾಂಗ್ರೆಸ್‌ ಮುಖಂಡ ಚಿದಂಬರಂ ಮಗ ಕಾರ್ತಿ ಅವರು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಬಂಧಿತರಾಗಿರುವುದನ್ನು ಬಳಸಿಕೊಂಡು ವಿರೋಧ ಪಕ್ಷಕ್ಕೆ ತಿರುಗೇಟು ನೀಡಲು ಬಿಜೆಪಿ ಪ್ರಯತ್ನಿಸುವ ಸಾಧ್ಯತೆ ಇದೆ.

ADVERTISEMENT

ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ಈ ಅಧಿವೇಶನದಲ್ಲಿಯೇ ಮಂಡಿಸಿ ಅಂಗೀಕಾರ ಮಾಡಿಕೊಳ್ಳಲು ಸರ್ಕಾರ ಪ್ರಯತ್ನಿಸಲಿದೆ.

ಜನವರಿ 29ರಂದು ಆರಂಭವಾದ ಬಜೆಟ್‌ ಅಧಿವೇಶನ ಫೆಬ್ರುವರಿ 9ರವರೆಗೆ ನಡೆದಿತ್ತು. ಸೋಮವಾರ ಆರಂಭವಾಗಲಿರುವ ಅಧಿವೇಶನದ ಎರಡನೇ ಭಾಗ ಏಪ್ರಿಲ್‌ 6ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.