ನವದೆಹಲಿ (ಪಿಟಿಐ): ಐದು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳಾದ ಮನೋಜ್ ಮತ್ತು ಪ್ರದೀಪ್ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕುರಿತು ಅಡಿಷನಲ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸಂಜಯ್ ಗರ್ಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರಿ ಪರ ವಕೀಲರು, `ಹೌದು. ಇಬ್ಬರೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದರು.
ಘಟನೆಗೆ ಸಂಬಂಧಿಸಿದಂತೆ ಸೋಮವಾರ ಬಿಹಾರದಲ್ಲಿ ಬಂಧಿಸಿರುವ ಎರಡನೇ ಆರೋಪಿ ಪ್ರದೀಪ್ನನ್ನು ಮಂಗಳವಾರ ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿರುವ ಇಲ್ಲಿನ ಸೆಷನ್ಸ್ ನ್ಯಾಯಾಲಯ ಬುಧವಾರ ಇಬ್ಬರನ್ನೂ ತನ್ನ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.
ಪ್ರದೀಪ್ ಅತ್ಯಾಚಾರ ಎಸಗಿದ್ದಾನೆ ತಾನು ನಿರಪರಾಧಿ ಎಂದು ಹೇಳಿದ ಮನೋಜ್ ಹೇಳಿಕೆಯನ್ನು ಆಧರಿಸಿ ಪ್ರದೀಪ್ನನ್ನು ಸೋಮವಾರ ಪೊಲೀಸರು ಬಂಧಿಸಿದ್ದರು. ಧನಕ್ಕೊಳಗಾದ ಸಂದರ್ಭದಲ್ಲಿ ಪ್ರದೀಪ್ ತಾನು ದೊಡ್ಡ ತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ.
ಬಾಲಕಿ ಆರೋಗ್ಯದಲ್ಲಿ ಚೇತರಿಕೆ
ನವದೆಹಲಿ (ಐಎಎನ್ಎಸ್): ಅತ್ಯಾಚಾರಕ್ಕೆ ಒಳಗಾಗಿರುವ ದೆಹಲಿಯ ಐದು ವರ್ಷದ ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ.
ನಿರೀಕ್ಷಿಸಿದಂತೆ ಬಾಲಕಿಯ ಆರೋಗ್ಯ ಸುಧಾರಿಸಿದ್ದು, ಜ್ವರ ಕೂಡ ಕಡಿಮೆಯಾಗಿದೆ ಎಂದು ಏಮ್ಸನ ( ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ಯ ವೈದ್ಯಕೀಯ ಅಧೀಕ್ಷಕ ಡಿ.ಕೆ ಶರ್ಮಾ ತಿಳಿಸಿದ್ದಾರೆ.
ದ್ರವ ರೂಪದ ಆಹಾರವನ್ನು ಸೇವಿಸುತ್ತಿರುವ ಬಾಲಕಿ, ಬೆಳಿಗಿನ ಉಪಹಾರವನ್ನೂ ಮಾಡಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಇನ್ನೂ ಎರಡು ವಾರಗಳು ಬೇಕು. ಬಾಲಕಿಗೆ ತನಗೆ ಏನಾಗಿದೆ ಎಂದು ತಿಳಿಯದಷ್ಟು ಚಿಕ್ಕ ವಯಸ್ಸು ಆಗಿರುವುದರಿಂದ ಅಗತ್ಯ ಇದ್ದರೆ ಆಪ್ತಸಮಾಲೋಚನೆ ನಡೆಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.
ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಬಲಿಯಾ (ಪಿಟಿಐ): ಹದಿನೈದು ವರ್ಷದ ಬಾಲಕಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಾನ್ಸ್ದೀಹ್ ಪ್ರದೇಶದಲ್ಲಿ ನಡೆದಿದೆ.ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿಯ ಜತೆ ದೇವಸ್ಥಾನಕ್ಕೆ ತೆರಳಿದ್ದ ಬಾಲಕಿಯನ್ನು ನಾಲ್ವರು ಯವಕರು ಅಪಹರಿಸಿ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದುಅತ್ಯಾಚಾರ ಎಸಗಿ ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ನಂತರ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ಘಟನೆಗೆ ಬಗ್ಗೆ ವಿವರ ನೀಡಿ, ಆತ್ಮಹತ್ಯೆಗೆ ಯತ್ನಿಸಿದ್ದು ಕುಟುಂಬದ ಸದಸ್ಯರು ಸಕಾಲದಲ್ಲಿ ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ದಾಖಲಿಸಿಕೊಂಡು, ಆರೋಪಿಗಳಾದ ದೇವೇಂದ್ರ ಕುಮಾರ್, ಶಾಂ ಲಾಲ್, ಮನೋಜ್ ಕುಮಾರ್ ಮತ್ತು ಅಮರೇಶ್ ಕುಮಾರ್ ಎಂಬುವರನ್ನು ಬಂಧಿಸ ಲಾಗಿದೆ ಎಂದು ಜಿಲ್ಲಾ ಎಸ್ಪಿ ಅಶೋಕ್ ತ್ರಿಪಾಠಿ ಹೇಳಿದ್ದಾರೆ.
ಅತ್ಯಾಚಾರ: ಬಾಲಕಿ ಸ್ಥಿತಿ ಗಂಭೀರ
ನಾಗಪುರ (ಪಿಟಿಐ): ಅತ್ಯಾಚಾರಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಗನ್ಸೌರ್ ಪಟ್ಟಣದ ಐದು ವರ್ಷದ ಬಾಲಕಿಯ ಆರೋಗ್ಯ ಕ್ಷೀಣಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಂಗಳವಾರ ಇಲ್ಲಿ ಹೇಳಿವೆ.
`ಬಾಲಕಿಯ ಆರೋಗ್ಯ ಕ್ಷೀಣಿಸುತ್ತಿದೆ' ಎಂದು ಆಸ್ಪತ್ರೆಯ ವಕ್ತಾರ ತಿಳಿಸಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ರಾಮದಾಸ್ಪೇಟ್ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶ ಗೃಹ ಸಚಿವ ಉಮಾಶಂಕರ ಗುಪ್ತಾ ಅವರು ಸೋಮವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ತಪ್ಪಿತಸ್ಥರನ್ನು ಪೊಲೀಸರು ಶೀಘ್ರವೇ ಹಿಡಿಯಲಿದ್ದಾರೆ ಎಂದು ಬಾಲಕಿಯ ಕುಟುಂಬಕ್ಕೆ ಭರವಸೆ ನೀಡಿದ್ದರು.35 ವರ್ಷದ ಫಿರೋಜ್ ಖಾನ್ ಎಂಬುವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಬಾಲಕಿಯನ್ನು ಕಳೆದ ಎಪ್ರಿಲ್ 20ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಪ್ರದೇಶದಿಂದ ಮಹಾರಾಷ್ಟದ ನಾಗಪುರಕ್ಕೆ ತರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.