ADVERTISEMENT

ಇಲಿ ಕಡಿತ ಪ್ರಕರಣ: ಸಿಬ್ಬಂದಿ ವಜಾ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಜೋಧ್‌ಪುರ(ಐಎಎನ್‌ಎಸ್): ಪಾರ್ಶ್ವವಾಯು ಪೀಡಿತ ರೋಗಿಯೊಬ್ಬರ ಮೂಗು, ಬಾಯಿ, ಕೆನ್ನೆಗಳನ್ನು ಇಲಿಗಳು ಕಡಿದು ಹಾಕಿದ ಹಿನ್ನೆಲೆಯಲ್ಲಿ ನಿಷ್ಕಾಳಜಿ ತೋರಿದ ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ವಜಾ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಪಾಳಿಯಲ್ಲಿದ್ದ ನರ್ಸ್ ಸುನಿತಾ ದೇವಿ ಹಾಗೂ ರೋಗಿಯ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವಜಾಗೊಳಿಸಲಾಗಿದ್ದು ತನಿಖೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆ ಅಧಿಕಾಗಳು  ತಿಳಿಸಿದ್ದಾರೆ.

~ಆರೋಗ್ಯ ರಕ್ಷಣೆಯ ಹೊಣೆ ರಾಜ್ಯ ಸರ್ಕಾರದ್ದು~

ADVERTISEMENT

ನವದೆಹಲಿ ವರದಿ: ರೋಗಿಗಳ ಚಿಕಿತ್ಸೆ ಬಗ್ಗೆ ಅಗತ್ಯ ಕಾಳಜಿ ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ತಾನದ ಜೋಧ್‌ಪುರದ ಮಥುರಾ ದಾಸ್ ಮತ್ತೂರು ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತ 70 ವರ್ಷದ ರೋಗಿಯನ್ನು ಇಲಿಗಳು ಕಡಿದು ಗಂಭೀರ ಗಾಯ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತಾಡಿದ ಆಜಾದ್ ಸ್ಥಳೀಯ ಆರೋಗ್ಯ ಇಲಾಖೆಯೇ ನೇರ ಹೊಣೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಆಸ್ಪತ್ರೆ ಕಟ್ಟಡ ಹಾಗೂ ಇನ್ನಿತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಣ ನೀಡುತ್ತದೆ. ಆದರೆ, ಆರೋಗ್ಯ ರಕ್ಷಣೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಲ್ಲದೆ ರಾಜ್ಯ ಸಚಿವರೇ ವ್ಯವಸ್ಥೆಗೆ ಹೊಣೆಯಾಗುತ್ತಾರೆ. ಆರೋಗ್ಯ ಇಲಾಖೆಯು ಆಸ್ಪತ್ರೆಗಳ ನಿರ್ವಹಣೆ ಹಾಗೂ ಸ್ಥಿತಿಗತಿಯ ಮೇಲೆ  ನಿಗಾ ಆರೋಗ್ಯ ಇಲಾಖೆಯೇ ವಹಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.