ನವದೆಹಲಿ (ಪಿಟಿಐ): ಒಂಬತ್ತು ವರ್ಷಗಳ ಹಿಂದಿನ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜುಲೈ 4ರಂದು ಗುಜರಾತ್ ಹೈಕೋರ್ಟ್ಗೆ ಮೊದಲ ಆರೋಪಪಟ್ಟಿ ಸಲ್ಲಿಸಲಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಸಿಬಿಐ ಕುಮಾರ್ ಅವರನ್ನು `ಮಾಫಿ ಸಾಕ್ಷಿ' ಎಂದು ಪರಿಗಣಿಸಿತ್ತು. 1979ನೇ ತಂಡದ ಐಪಿಎಸ್ ಅಧಿಕಾರಿಯಾಗಿರುವ ಅವರು ಇದೇ 31ರಂದು ನಿವೃತ್ತರಾಗಲಿದ್ದಾರೆ.
19 ವರ್ಷದ ಇಶ್ರತ್ ಹಾಗೂ ಇತರ ಮೂವರನ್ನು ಗುಜರಾತ್ ಪೊಲೀಸರು ಸಾಮೂಹಿಕವಾಗಿ ನಕಲಿ ಎನ್ಕೌಂಟರ್ನಲ್ಲಿ ಕೊಂದು ಹಾಕಿರುವ ಈ ಪ್ರಕರಣದ ವಿಚಾರಣೆಗೆ ಸಿಬಿಐ ಇನ್ನೂ ಹೆಚ್ಚಿನ ಕಾಲಾವಕಾಶ ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಶ್ರತ್ ಎನ್ಕೌಂಟರ್ ಒಂದು ಪೂರ್ವ ನಿಯೋಜಿತ ಸಂಚಾಗಿದ್ದು ಸಮಗ್ರ ತನಿಖೆಯಾಗಬೇಕಿದೆ. ಕುಮಾರ್ ವಹಿಸಿದ ಪಾತ್ರ ಮತ್ತು ಇತರ ವಿಷಯಗಳ ಕುರಿತು ಇನ್ನೂ ಅನೇಕರನ್ನು ಪ್ರಶ್ನಿಸಬೇಕಾಗಿರುವ ಕಾರಣ ಕಾಲಾವಕಾಶದ ಅಗತ್ಯವಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಪಾಂಡೆಗೆ ಹಿನ್ನಡೆ
ಅಹಮದಾಬಾದ್ (ಪಿಟಿಐ): ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ತಮ್ಮ ವಿರುದ್ಧದ ದೂರು ಕೈಬಿಡುವಂತೆ ಕೋರಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಪಿ.ಪಾಂಡೆ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
`ತಾವು ಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದರೂ ಈ ಪ್ರಕರಣದಲ್ಲಿ ಪಾಂಡೆ ತಲೆಮರೆಸಿಕೊಂಡಿದ್ದಾರೆ. ಇವರ ಅರ್ಜಿಯನ್ನು ಪುರಸ್ಕರಿಸಬಾರದು' ಎಂದು ನ್ಯಾಯಮೂರ್ತಿ ಹರ್ಷ ದೇವನಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಲು ಹೊರಟಿದೆ. ಈ ಹಂತದಲ್ಲಿ ಪಾಂಡೆ ವಿರುದ್ಧದ ದೂರನ್ನು ಕೈಬಿಡುವುದು ಸರಿಯಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.