ಜೆರುಸಲೆಂ: ಇಸ್ರೇಲ್ ಜತೆಗಿನ ಭಾರತದ ಒಪ್ಪಂದಗಳನ್ನು ‘ವಿಶೇಷ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧ ಉಭಯರಾಷ್ಟ್ರಗಳು ಜಂಟಿಯಾಗಿ ಹೋರಾಡಲಿವೆ’ ಎಂದಿದ್ದಾರೆ.
ಇಸ್ರೇಲ್ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಮಂತ್ರಿ ಎನಿಸಿಕೊಂಡಿರುವ ಮೋದಿ ಮೂರು ದಿನಗಳ ಪ್ರವಾಸವನ್ನು ಮಂಗಳವಾರ ಆರಂಭಿಸಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಇಸ್ರೇಲ್ ತಲುಪಲಿರುವ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ರಾತ್ರಿ ಭೋಜನಕೂಟದ ಭಾಗಿಯಾಗಲಿದ್ದಾರೆ.
ಈ ಪ್ರವಾಸದಲ್ಲಿ ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದ ಕೇಂದ್ರ ಬಿಂದುವಾಗಲಿದೆ. ಭಾರತ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿ 25 ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಈ ಭೇಟಿ ಐತಿಹಾಸಿಕ ಎಂದೇ ಪರಿಗಣಿಸಲಾಗುತ್ತಿದೆ.
ಈ ಭೇಟಿಯಲ್ಲಿ ಮೋದಿಯವರು ರಕ್ಷಣೆ, ಸೈಬರ್ ಭದ್ರತೆ, ಆಹಾರ ಭದ್ರತೆ, ಕೃಷಿ ನೀರಿನ ನಿರ್ವಹಣೆ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ರಕ್ಷಣಾ ತಂತ್ರಜ್ಞಾನಕ್ಕೆ ಒತ್ತು: ಇದೀಗ ಭಾರತ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದಿಂದ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸೇನೆಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಸಬೇಕಾದ ಅಗತ್ಯವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡ್ರೋನ್, ರಾಡಾರ್, ಕ್ಷಿಪಣಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಅಭಿವೃದ್ಧಿ ಬಗ್ಗೆಯೂ ಉಭಯ ರಾಷ್ಟ್ರಗಳ ನಾಯಕರು ಚರ್ಚಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.