ADVERTISEMENT

ಇ-ಮೇಲ್ ಕಳುಹಿಸಿದವನ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಜಮ್ಮು (ಐಎಎನ್‌ಎಸ್):  ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ ನಡೆದ  ಸ್ಫೋಟದ ಹೊಣೆ ಹೊತ್ತ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಸ್ಫೋಟವನ್ನು ಹುಜಿ ಸಂಘಟನೆಯು ನಡೆಸಿದೆ ಎಂಬ ಮಾಹಿತಿ ಆ      ಇ-ಮೇಲ್‌ನಲ್ಲಿತ್ತು.
ಬಂಧಿತ ವ್ಯಕ್ತಿಯನ್ನು ಮಹಮದ್ ಸಯೀದ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಕಿಶ್ತ್‌ವಾರ್  ಪಟ್ಟಣದಲ್ಲಿರುವ ಗ್ಲೋಬಲ್ ಇಂಟರ್‌ನೆಟ್ ಕೆಫೆಯಿಂದ ಇ-ಮೇಲ್ ಕಳುಹಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

`ಇ-ಮೇಲ್ ಕಳುಹಿಸಲು ಆತನಿಗೆ  ಪ್ರೇರಣೆ ನೀಡಿದ ಅಂಶಗಳ ಮತ್ತು ಯಾರು ಆತನಿಂದ ಈ ಕೆಲಸ ಮಾಡಿಸಿದರು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಸ್ಫೋಟ ನಡೆದ ಕೆಲವು ಗಂಟೆಗಳಲ್ಲಿ ಬಂದ ಈ ಇ-ಮೇಲ್‌ಗೆ ಸಂಬಂಧಿಸಿದಂತೆ ಸೈಬರ್ ಕೆಫೆಯ ಇಬ್ಬರು ಮಾಲೀಕರು ಸೇರಿದಂತೆ ಒಟ್ಟು ಐವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂವರು ಅಧಿಕಾರಿಗಳು ತನಿಖೆ ನಡೆಸಲು ಶುಕ್ರವಾರ ಕಿಶ್ತ್‌ವಾರ್ ಪಟ್ಟಣಕ್ಕೆ  ಆಗಮಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT