ನವದೆಹಲಿ (ಪಿಟಿಐ): ನಕಲಿ ಎನ್ಕೌಂಟರ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ 18 ಪೊಲೀಸರನ್ನು ತಪ್ಪಿತಸ್ಥರು ಎಂದು ದೆಹಲಿಯ ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ಘೋಷಿಸಿದೆ. ಶಿಕ್ಷೆ ಪ್ರಮಾಣವನ್ನು ಶನಿವಾರ (ಜೂನ್ 7) ಪ್ರಕಟಿಸುವುದಾಗಿ ತಿಳಿಸಿದೆ.
ಇವರಲ್ಲಿ ಏಳು ಮಂದಿ ವಿರುದ್ಧ ಕೊಲೆ ಆಪಾದನೆ, ಉಳಿದ 10 ಜನರ ವಿರುದ್ಧ ಕ್ರಿಮಿನಲ್ ಒಳಸಂಚು, ಅಪಹರಣ ಮತ್ತಿತರ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ತಪ್ಪಿತಸ್ಥ ಬೇರೊಂದು ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾರಣ ಆತನಿಗೆ ಈ ಪ್ರಕರಣದಲ್ಲಿ ಕೋರ್ಟ್ ವಿನಾಯ್ತಿ ನೀಡಿದೆ.
ಗಾಜಿಯಾಬಾದ್ ಮೂಲದ ಎಂಬಿಎ ಪದವೀಧರ ರಣವಿೀರ್ ಸಿಂಗ್ 2009ರ ಜುಲೈನಲ್ಲಿ ನೌಕರಿ ಹುಡುಕಿಕೊಂಡು ಡೆಹ್ರಾಡೂನ್ಗೆ ಹೋಗಿದ್ದರು. ಅಲ್ಲಿನ ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಎನ್ಕೌಂಟರ್ ಹೆಸರಿನಲ್ಲಿ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಪ್ರಕರಣ ಇದಾಗಿದೆ.
2009ರ ಜುಲೈ 3ರಂದು ಉತ್ತರಾಖಂಡಕ್ಕೆ ರಾಷ್ಟ್ರಪತಿ ಅವರು ಭೇಟಿ ನೀಡಿದ್ದ ಕಾರಣ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ರಣವೀರ್ (ಹತ್ಯೆಯಾದವ) ಇಬ್ಬರು ಸ್ನೇಹಿತರೊಂದಿಗೆ ಬೈಕ್ನಲ್ಲಿ ವೇಗವಾಗಿ ಸಂಚರಿಸುತ್ತಿದ್ದ. ತಪಾಸಣೆಗಾಗಿ ತಡೆದು ನಿಲ್ಲಿಸಿದ ಪೊಲೀಸರಿಂದ ರಣವೀರ್ ರಿವಾಲ್ವಾರ್ ಕಸಿದುಕೊಂಡ ಎಂಬ ಉತ್ತರಾಖಂಡ ಪೊಲೀಸರು ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.