ಡೆಹ್ರಾಡೂನ್ (ಪಿಟಿಐ): ಬಹುಮತದ ಕೊರತೆ ಇದ್ದರೂ ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮುಂದಿನ ಸರ್ಕಾರ ರಚಿಸುವ ಕಸರತ್ತು ಆರಂಭಿಸಿವೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ಬಿಎಸ್ಪಿ, ಉತ್ತರಾಖಂಡ ಕ್ರಾಂತಿ ದಳ (ಯುಕೆಡಿ) ಹಾಗೂ ಪಕ್ಷೇತರ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.
`ಬಿಎಸ್ಪಿ ಮತ್ತು ಕೆಲವು ಪಕ್ಷೇತರರು ನಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ~ ಎಂದು ಕಾಂಗ್ರೆಸ್ ಮುಖಂಡ ವಿಜಯ್ ಬಹುಗುಣ ಹೇಳಿದ್ದಾರೆ.
ಮಂಗಳವಾರ ರಾತ್ರಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಅವರನ್ನು ಭೇಟಿ ಮಾಡಿದ ಉನ್ನತ ಮಟ್ಟದ ನಿಯೋಗವು, ಸರ್ಕಾರ ರಚಿಸುವ ಹಕ್ಕು ಮಂಡಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಉನ್ನತ ಮಟ್ಟದ ನಿಯೋಗವೊಂದು ಚುನಾವಣಾ ಉಸ್ತುವಾರಿ ಬೀರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ದೌಡಾಯಿಸಿದೆ. ಬಿಜೆಪಿ ಪಾಳಯದಲ್ಲೂ ಸರ್ಕಾರ ರಚನೆಗೆ ಕಸರತ್ತು ಮುಂದುವರಿದಿದೆ.
`ನಾವು ಸನ್ನಿವೇಶವನ್ನು ಗಮನಿಸುತ್ತಿದ್ದೇವೆ. ಸರ್ಕಾರ ರಚಿಸುವುದು ಸೂಕ್ತ ಎನಿಸಿದಲ್ಲಿ ಖಂಡಿತವಾಗಿಯೂ ನಮ್ಮ ಹಕ್ಕು ಮಂಡಿಸುತ್ತೇವೆ. ಅಲ್ಲದೆ ಸರ್ಕಾರ ರಚನೆ ಬಗ್ಗೆ ನಾವು ಶಾಸಕರ ಅನಿಸಿಕೆಯನ್ನೂ ಕೇಳುತ್ತೇವೆ~ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಹೇಳಿದ್ದಾರೆ.
ಈಗಾಗಲೇ ಪಕ್ಷದ ಘಟಾನುಘಟಿಗಳಾದ ರಾಜನಾಥ್ ಸಿಂಗ್ ಹಾಗೂ ಅನಂತ್ ಕುಮಾರ್ ಇಲ್ಲಿ ಸಮಾಲೋಚನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.