ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಕಾಂಗ್ರೆಸ್ ನೇತೃತದ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.
ಪಕ್ಷವು ರಾಜ್ಯಪಾಲರ ಮುಂದೆ ಮೂವರು ಪಕ್ಷೇತರ ಹಾಗೂ ಉತ್ತರಾಖಂಡ ಕ್ರಾಂತಿ ದಳದ (ಯುಕೆಡಿ) ಒಬ್ಬ ಶಾಸಕರ ಬೆಂಬಲ ಪ್ರದರ್ಶಿಸಿ ಸರ್ಕಾರ ರಚನೆಗೆ ಸೈ ಎನ್ನಿಸಿಕೊಂಡಿದೆ.
ಕಾಂಗ್ರೆಸ್, ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಹೊಂದಿದೆ ಎಂದು ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹೇಳಿದ್ದಾರೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಈ ನಾಲ್ವರು ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಬಲಾಬಲ 36ಕ್ಕೆ ಏರಿದೆ.
ಪಕ್ಷವು ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಿದ ಬಳಿಕ ಅಧಿಕೃತವಾಗಿ ಕಾಂಗ್ರೆಸ್ಗೆ ಸರ್ಕಾರ ರಚಿಸುವ ಆಹ್ವಾನ ನೀಡಲಾಗುವುದು ಎಂದು ಆಳ್ವಾ ತಿಳಿಸಿದ್ದಾರೆ. ಪಕ್ಷೇತರ ಶಾಸಕರಾದ ಲಾಲ್ಕ್ವಾನ್ ಕ್ಷೇತ್ರದ ಹರೀಶ್ ದುರ್ಗಪಾಲ್, ದೇವಪ್ರಯಾಗದ ಮಂತ್ರಿಪ್ರಸಾದ್ ನೈಥಾನಿ, ತೇರಿಯ ದಿನೇಶ್ ಧನಾನಿ ಹಾಗೂ ಯುಕೆಡಿಯ ಪ್ರೀತಮ್ ಸಿಂಗ್ ಪನ್ವಾರ್ (ಯಮುನೋತ್ರಿ) ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಪಕ್ಷಕ್ಕೆ ಗಡುವು ನೀಡಲಾಗಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಇದು ನನ್ನ ಕೆಲಸವಲ್ಲ~ ಎಂದು ಆಳ್ವಾ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.