ತಿರುವನಂತಪುರ: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಮಾನ್ಯತೆ ಕೊಡಿಸುವುದಕ್ಕಾಗಿ ಬಿಜೆಪಿಯ ಕೇರಳ ಘಟಕದ ನಾಯಕ ಆರ್.ಎಸ್. ವಿನೋದ್ ಎಂಬುವವರು ಕಾಲೇಜೊಂದರ ಮಾಲೀಕರಿಂದ ₹ 5.6 ಕೋಟಿ ಲಂಚ ಪಡೆದ ವಿಷಯ ಬೆಳಕಿಗೆ ಬಂದಿದೆ. ಪಕ್ಷದ ಆಂತರಿಕ ಸಮಿತಿ ನಡೆಸಿದ ತನಿಖೆಯ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿರುವುದೇ ಮಾಹಿತಿ ಬಯಲಾಗಲು ಕಾರಣ.
ಲಂಚ ಪಡೆದ ವಿಷಯ ವಿವಾದಕ್ಕೀಡಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ಘಟಕವು ವಿನೋದ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
ತಿರುವನಂತಪುರದ ವರ್ಕಲಾ ಕಾಲೇಜಿನ ಮಾಲೀಕ ಆರ್. ಶಾಜಿ ಅವರಿಂದ ವಿನೋದ್ ಲಂಚ ಪಡೆದಿದ್ದರು. ವಿನೋದ್ ಅವರು ರಾಜ್ಯ ಬಿಜೆಪಿ ಘಟಕದ ಸಹಕಾರ ವಿಭಾಗದ ಸಂಚಾಲಕರಾಗಿದ್ದರು. ಸತೀಶ್ ನಾಯರ್ ಎಂಬ ವ್ಯಕ್ತಿಗೆ ನವದೆಹಲಿಯಲ್ಲಿ ಲಂಚದ ಮೊತ್ತವನ್ನು ಹಸ್ತಾಂತರಿಸಲಾಗಿದೆ ಎಂದೂ ಆಂತರಿಕ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲಿಗೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರು ವಿನೋದ್ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದರು. ಪ್ರಕರಣದ ಬಗ್ಗೆ ಸಿಪಿಐ(ಎಂ) ಸಂಸದರು ಗುರುವಾರ ಲೋಕಸಭೆಯಲ್ಲಿ ಗಮನಸೆಳೆದಿದ್ದಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಈ ಮಧ್ಯೆ, ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಜೆಪಿಯ ಕೇರಳ ಘಟಕದ ಉಸ್ತುವಾರಿ ಎಚ್. ರಾಜಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.